ಬಂಟ್ವಾಳ : ಮಕ್ಕಳ ಹಕ್ಕುಗಳ ಸಂಚಲನಾ ಸಮಿತಿ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ(ರಿ.)ದ.ಕ. ಇದರ ಆಶ್ರಯದಲ್ಲಿ ಮಕ್ಕಳ ಮಾಸೋತ್ಸವದ ಅಂಗವಾಗಿ ಕೃಷಿ-ಖುಷಿ ಕಾರ್ಯಕ್ರಮವು ಗಂಜಿಮಠದಲ್ಲಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಒಡ್ಡೂರು ಫಾರ್ಮ್ಸ್ ನಲ್ಲಿ ಮಂಗಳವಾರ ನಡೆಯಿತು.
ಬಂಟ್ವಾಳ ತಾಲೂಕಿನ ೫ ಸರಕಾರಿ ಶಾಲೆಗಳ ಸುಮಾರು ೪೦ ವಿದ್ಯಾರ್ಥಿಗಳ ತಂಡ ಶಾಸಕರ ಜೊತೆ ಕೃಷಿ, ಹೈನುಗಾರಿಕೆ, ನೀರಾವರಿ ವಿಚಾರಗಳ ಕುರಿತು ಚರ್ಚಿಸಿ ವಿಚಾರ ವಿನಿಮಯ ನಡೆಸಿದರು.
ಆರಂಭದಲ್ಲಿ ಬಿಳಿ ಹಾಳೆಯಲ್ಲಿ ಚಿತ್ತಾರ ಅರಳಿಸುವ ಮೂಲಕ ಕೃಷಿ-ಖುಷಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಾತನಾಡಿ, ಕೃಷಿಯಲ್ಲಿ ನಾವು ವರ್ಷದ ಕೆಲವೇ ತಿಂಗಳು ದುಡಿದರೂ ನಮಗೆ ನೆಮ್ಮದಿಯ ಜೀವನ ಸಿಗುತ್ತದೆ. ಇಂತಹ ನೆಮ್ಮದಿ ಯಾವ ಉದ್ಯಮದಲ್ಲೂ ಸಿಗಲು ಸಾಧ್ಯವಿಲ್ಲ. ಇಲ್ಲಿ ನಮ್ಮ ಪರಿಶ್ರಮವೇ ಮುಖ್ಯವಾಗಿದ್ದು, ಬರಡು ಭೂಮಿಯಲ್ಲೂ ಈಗ ಬಂಗಾರದ ಬೆಳೆ ತೆಗೆಯುತ್ತಿದ್ದೇನೆ. ಹೈನುಗಾರಿಕೆ, ಸಾವಯವ ಕೃಷಿಯ ಕುರಿತು ವಿವರಿಸಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅನುಭವಾತ್ಮಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಭಾರತೀಯತೆ ಹೊಸ ಶಿಕ್ಷಣ ನೀತಿ ಕಲಿಸುತ್ತದೆ. ಆಸಕ್ತಿಯ ವಿಚಾರದಲ್ಲಿ ಅಧ್ಯಯನ ನಡೆಸಬಹುದಾಗಿದೆ ಎಂದರು.
ಬಂಟ್ವಾಳ ಗ್ರಾಮಾಂತರ ಪಿಎಸ್ಐ ಪ್ರಸನ್ನ, ಆರೋಗ್ಯ ಇಲಾಖೆ ಡಾ| ಹೇಮಪ್ರಭಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ, ಚೈಲ್ಡ್ ಲೈನ್ನ ದೀಕ್ಷಿತ್ ಅವರು ಮಾಹಿತಿ ನೀಡಿದರು.
ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪ್ರೊಬೆಷನರಿ ಪಿಎಸ್ಐ ರಾಮಕೃಷ್ಣ, ಶಿಕ್ಷಣ ಸಂಯೋಜಕಿ ಸುಜಾತಕುಮಾರಿ, ಸಂಪನ್ಮೂಲ ವ್ಯಕ್ತಿಗಳಾದ ಮಂಜು ವಿಟ್ಲ, ಮೌನೇಶ್ ವಿಶ್ವಕರ್ಮ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.
ಸಂದೀಪ್ ಸಾಲ್ಯಾನ್ ಸ್ವಾಗತಿಸಿ, ಹರೀಶ್ ಮಾಂಬಾಡಿ ವಂದಿಸಿದರು.