ಬೆಳ್ತಂಗಡಿ: ಭಜನೆಯಲ್ಲಿ ಶಿಸ್ತು ಇದ್ದರೆ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಸಂಘಟನೆಯಿಂದ ಭಜನಾ ಮಂಡಳಿಗಳಲ್ಲಿ ಶಿಸ್ತು ಕಾಪಾಡಲು ಸಾಧ್ಯವಾಗುತ್ತದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸಂಜೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಪ್ರಾರಂಭವಾದ 23 ನೇ ವರ್ಷದ ಭಜನಾ ತರಬೇತಿ ಕಮ್ಮಟದಲ್ಲಿ ಭಾಗವಹಿಸುತ್ತಿರುವ ಶಿಬಿರಾರ್ಥಿಗಳಿಗೆ ಆಶೀರ್ವದಿಸಿದರು.
ಭಗವಂತನನ್ನು ಒಲಿಸಿಕೊಳ್ಳಲು ಭಜನೆಯಿಂದ ಪೂರಕಮಂತ್ರವಾಗಿದೆ.ನೃತ್ಯ ಭಜನೆಯಲ್ಲಿ ಸಂಗೀತ ಭಜನೆಗೆ ಪ್ರಾಧಾನ್ಯತೆ ನೀಡಬೇಕು.ಭಜನಾ ಸಂಗೀತಕ್ಕೆ ಆಕಾರವನ್ನು ಕೊಟ್ಟ ದಾಸ ಶ್ರೇಷ್ಠರು ಧರ್ಮ ಪ್ರಚಾರವನ್ನು ಸುಲಭವಾಗಿ ಜನಸಾಮಾನ್ಯರಿಗೆ ಮನದಟ್ಟು ಮಾಡಿದರು.ಶ್ಲೋಕಗಳನ್ನು ನೆನಪಿಡುವುದು ಕಷ್ಟ, ಆದರೆ ಭಜನೆಗಳನ್ನು ಸುಲಭವಾಗಿ ನೆನಪು ಇಟ್ಟುಕೊಳ್ಳಬಹುದು.
ಭಜನೆಯ ಸತತ ಅಭ್ಯಾಸದಿಂದ ಸಮಾನತೆ ಒಗ್ಗಟ್ಟು, ಏಕಾಗ್ರತೆ ಕಾಪಾಡಬಹುದು ಎಂದರು. ಸಿನಿಮಾ ಹಾಡುಗಳು ಕೇಳಲು ಇಂಪಾಗಿರುತ್ತದೆ. ಆದರೆ ಅದು ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆಗಳು ಸಾವಿರಾರು ವರ್ಷಗಳಿಂದ ಶಾಶ್ವತವಾಗಿ ಉಳಿದಿವೆ.ನಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ರಾಮಾಯಣ,ಮಹಾಭಾರತದ ಕಥೆಯ ಸೂಕ್ಷ್ಮತೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಭಜನಾ ಮಂಡಳಿಗಳನ್ನು ದೇವಸ್ಥಾನವಾಗಿಸದೆ ಭಜನಾ ಮಂಡಳಿಯಾಗಿ0ದ ಉಳಿಸಿಕೊಳ್ಳಬೇಕು ಭಜನಾ ಮಂಡಳಿಗಳಲ್ಲಿ ರಾಗ, ತಾಳ ಪಕ್ವವಾಗಿರಬೇಕು. ಉತ್ತರ ಕರ್ನಾಟಕದಲ್ಲಿ ಭಜನೆ ಆಕರ್ಷಣೀಯವಾಗಿ ನಡೆಯುತ್ತದೆ ಎಂದು ಡಾ. ಹೆಗ್ಗಡೆಯವರು ಶಿಬಿರಾರ್ಥಿಗಳಿಗೆ ವಿವರಿಸಿದರು.
ಸುಬ್ರಹ್ಮಣ್ಯ ಪ್ರಸಾದ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಹೆಗ್ಗಡೆಯವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ| ಎಲ್. ಎಚ್ ಮಂಜುನಾಥ್ ಮತ್ತು ಶಾಂತಿವನಟ್ರಸ್ಟ್ ನ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ ಗೌರವಾರ್ಪಣೆ ಮಾಡಿದರು, ಮಮತಾ ರಾವ್ ವಂದಿಸಿದರು.