ಬೆಳ್ತಂಗಡಿ: ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟವು ಅಸ್ತಿತ್ವಕ್ಕೆ ಬಂದಿದ್ದು, ಇದರ ಉದ್ಘಾಟನೆಯು ಫೆ.೬ ರಂದು ಬೆಳಗ್ಗೆ ೧೦ ಗಂಟೆಗೆ ಶ್ರೀ ಮಂಜುನಾಥೇಶ್ವರ ಕಲಾಭವನದ ಪಿನಾಕಿ ಹಾಲ್ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ರಾಮ ಕ್ಷತ್ರಿಯ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಡಾ| ಪ್ರಮೋದ್ ಆರ್.ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವರು, ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಕೃಷ್ಣ ಪಾಲೇಮಾರ್ ಒಕ್ಕೂಟವನ್ನು ಉದ್ಘಾಟಿಸಲಿದ್ದು, ರಾಧಾಕೃಷ್ಣ ದೇವಸ್ಥಾನ ಮಂಗಳೂರು (ಬಾಳಂಭಟ್ ಮನೆತನ)ದ ಡಾ| ಸತ್ಯಕೃಷ್ಣ ಭಟ್ ಆಶೀರ್ವಚನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಖ್ಯಾತ ಹೃದ್ರೋಗ ತಜ್ಞ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಡಾ| ಪ್ರಭಾಕರ್ ಎಚ್., ಉಡುಪಿಯ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಕಾಸರಗೋಡು ಜಿಲ್ಲೆ ರಾಮರಾಜ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಕಮಲಾಕ್ಷ ಕಲ್ಲುಗದ್ದೆ, ಬೆಳ್ತಂಗಡಿ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಬಿ.ಚಂದ್ರಕಾಂತ, ರಾಮ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಿ.ಎಚ್.ಪ್ರಭಾಕರ್ ಭಾಗವಹಿಸಲಿದ್ದಾರೆ.
ತಾಲೂಕು ರಾಮಕ್ಷತ್ರಿಯ ಸಂಘದ ೨೧ನೇ ವಾರ್ಷಿಕೋತ್ಸವ ಸಮಾರಂಭವು ಫೆ.೬ ರಂದು ಮಧ್ಯಾಹ್ನ ೨.೩೦ಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲಾಭವನದ ಪಿನಾಕಿ ಹಾಲ್ನಲ್ಲಿ ಜರಗಲಿದೆ. ನಿವೃತ್ತ ಜಿಲ್ಲಾ ಹಾಗೂ ಸೆಷನ್ ನ್ಯಾಯಾಧೀಶರಾದ ರಮಾನಂದ ಬೇಕಲ್ ಸಮಾರಂಭ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಚಂದ್ರಕಾಂತ ಬಿ. ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ರಾಜ್ಯ, ಜಿಲ್ಲಾ ಮಟ್ಟದಲ್ಲಿ ಗುರುತಿಸಲ್ಪಟ್ಟ ಸಮಾಜಬಾಂಧವರಿಗೆ ಸಮ್ಮಾನ ಹಾಗೂ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಗೌರವಿಸಲಾಗುವುದು ಎಂದು ತಿಳಿಸಿದರು.
ನೂತನ ಪದಾಧಿಕಾರಿಗಳು ಅಂದು ಅಧಿಕಾರ ಸ್ವೀಕರಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬೆಳ್ತಂಗಡಿ ತಾಲೂಕು ರಾಮಕ್ಷತ್ರಿಯ ಸಂಘದ ಸ್ಥಾಪಕಾಧ್ಯಕ್ಷ ವಿಶ್ವನಾಥ್ ಆರ್.ನಾಯಕ್, ಅಧ್ಯಕ್ಷ ಬಿ.ಚಂದ್ರಕಾಂತ್, ಸಿಬಂದಿ ವಿನೋದ್ ಬೇಕಲ್, ನಿರ್ದೇಶಕರಾದ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.