ದೇಶದ ಯುವಜನತೆ ಸಂವಿಧಾನದತ್ತವಾಗಿ ದೊರೆತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣವು ಮಾರಾಟದ ಸರಕಾಗಿದೆ ,ಶಿಕ್ಷಣ ಪಡೆದ ಯುವಜನರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸದೆ ದಿನದಿಂದ ದಿನಕ್ಕೆ ನಿರುದ್ಯೋಗದ ಸಂಖ್ಯೆ ಏರುತ್ತಾ ಇದೆ. ಆದರೆ ಇಂದಿನ ಯುವಜನತೆಗೆ ಮಾತ್ರ ನೈಜ ಸಮಸ್ಯೆಯ ಬಗೆಗೆ ಅರಿವಿಲ್ಲದಿರುವುದು ಖೇದಕರ. ಉದ್ಯೋಗದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಪ್ರಸ್ತುತ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳ ವೈಫಲ್ಯಗಳನ್ನು ಮರೆಮಾಚಲು ಮತೀಯ ವಿಚಾರಗಳ ವೈಭವೀಕರಣಕ್ಕೆ ಮುಂದಾಗಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಇಂದು (07-02-2022) ಡಿವೈಎಫ್ಐ ಕಚೇರಿಯಲ್ಲಿ ನಡೆದ ಸಂಗಾತಿ ರಮೇಶ್ ಅದ್ಯಪಾಡಿ ಅವರ 12 ನೇ ವರುಷದ ಸಂಸ್ಮರಣ ದಿನದ ನೆನಪಿನಲ್ಲಿ ಯುವಜನರ ಮುಂದಿರುವ ಸವಾಲುಗಳು ಎಂಬ ವಿಚಾರ ಕುರಿತಾಗಿ ವಿಷಯವನ್ನು ಮಂಡಿಸಿದರು.
ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳ ನಡುವೆ ಕೋಮು ಅಜೆಂಡಾಗಳನ್ನು ಹರಿಯ ಬಿಡಲಾಗುತ್ತಿದೆ. ಜಾತ್ಯತೀತವಾದಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್.ಎಸ್.ಎಸ್ ಅಜೆಂಡಾಗಳ ಜಾರಿಗೆ ಮುಂದಾಗುತಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂತೋಷ್ ಬಜಾಲ್ ಮಾತನಾಡುತ್ತಾ ಕಳೆದ ಕೋರೋನ ಅಲೆಯ ಸಂದರ್ಭದಲ್ಲಿ ದೇಶದ ಆರೋಗ್ಯ ಕ್ಷೇತ್ರದ ಅಸಮರ್ಪಕತೆಯ ದರ್ಶನವಾಗಿದೆ. ಸರಕಾರಿ ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳ ಕೊರತೆ , ಇರುವ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ, ವೆಂಟಿಲೇಟರ್, ಆಕ್ಸಿಜನ್ ಸಹಿತ ನುರಿತ ವೈದ್ಯರುಗಳ ಕೊರತೆಗಳನ್ನೇ ಖಾಸಗಿ ಆಸ್ಪತ್ರೆಗಳು ಬಂಡವಾಳವನ್ನಾಗಿಸಿ ಚಿಕಿತ್ಸೆ ಹೆಸರಲ್ಲಿ ನಿರಂತರ ನಡೆದ ಸುಲಿಗೆಗಳೆಲ್ಲಾವನ್ನೂ ದೇಶವು ಗಮನಿಸಿದೆ. ಆದರೆ ಕೋರೋನ ನಂತರದಲ್ಲಿಯೂ ಆರೋಗ್ಯ ಕ್ಷೇತ್ರ ಯಾವುದೇ ಸುಧಾರಣೆಯನ್ನು ಕಂಡಿಲ್ಲ. ಪ್ರಜಾಪ್ರಭುತ್ವ ದೇಶದ ಜನಪ್ರತಿನಿಧಿಗಳು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ವಿನಹ ಜನತೆಯ ಸಮಸ್ಯೆಗಳತ್ತ ಕನಿಷ್ಠ ಗಮನವನ್ನು ಹರಿಸುತ್ತಿಲ್ಲ. ಹಾಗಾಗಿ ಉತ್ತಮ ಆರೋಗ್ಯದ ರಕ್ಷಣೆ ಬಡ-ಮಧ್ಯಮ ವರ್ಗದ ಜನತೆಗೆ ಕೈಗೆಟುಕದಷ್ಟು ದುಬಾರಿಯಾಗಿದೆ. ಜಿಲ್ಲೆಯಲ್ಲಿ ಎಂಟು ಖಾಸಗಿ ಮೆಡಿಕಲ್ ಕಾಲೇಜುಗಳು ಇದ್ದರೂ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜ್ ಇಲ್ಲವಾಗಿದೆ. ಖಾಸಗಿ ಆಸ್ಪತ್ರೆಗಳ ಲೂಟಿ ಎಗ್ಗಿಲ್ಲದೆ ಸಾಗುತ್ತಿದೆ. ಆದರೆ ಯುವಜನರು ತಮ್ಮ ಬದುಕಿನಿಂದ ವಂಚಿತವಾದ ಆಹಾರ, ಆರೋಗ್ಯ, ಉದ್ಯೋಗದ ವಿಚಾರವಾಗಿ ಬೀದಿಗಿಳಿಯುವ ಬದಲು ಧರ್ಮ, ಜಾತಿಯ ಅಮಲಿನಲ್ಲಿ ಬೀದಿಗಿಳಿಯುವುದು ಖೇದಕರ ಎಂದರು.
ಸಭೆಯನ್ನು ಮನೋಜ್ ವಾಮಂಜೂರು ಸ್ವಾಗತಿಸಿದರು. ನವೀನ್ ಕೊಂಚಾಡಿ ವಂದಿಸಿದರು.