ಮಂಗಳೂರು: ಕಟೀಲು ಮೇಳದ ಪ್ರಧಾನ ಭಾಗವತ, ಬಲಿಪ ಪರಂಪರೆಯ ಕೊಂಡಿ ಪ್ರಸಾದ ಬಲಿಪ ಭಾಗವತರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಈ ಬಾರಿ ಮೇಳದ ತಿರುಗಾಟದಲ್ಲಿ ಇರಲಿಲ್ಲ. ತೆಂಕುತಿಟ್ಟು ಯಕ್ಷಗಾನದ ಬಲಿಪ ಪರಂಪರೆಯ ಬಲಿಪ ನಾರಾಯಣ ಭಾಗವತರ ಪುತ್ರರಾದ ಬಲಿಪ ಪ್ರಸಾದ್ ಅವರು, ರಕ್ತಗತವಾಗಿ ಬಂದಿದ್ದ ಯಕ್ಷಗಾನ ಭಾಗವತಿಕೆಯನ್ನು ಮೈಗೂಡಿಸಿಕೊಂಡು ಕಟೀಲು ಎರಡನೆಯ ಮೇಳದ ಪ್ರಧಾನ ಭಾಗವತರಾಗಿದ್ದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಎರಡನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಅವರು ಗಂಟಲು ಕ್ಯಾನ್ಸರ್ನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸಕ್ತ ವರ್ಷದ ಯಕ್ಷಗಾನ ತಿರುಗಾಟದಲ್ಲಿ ಭಾಗವಹಿಸಿರಲಿಲ್ಲ. ಮೂಡುಬಿದಿರೆ ಮಾರೂರಿನ ನೂಯಿ ಎಂಬಲ್ಲಿ ಜನಿಸಿದ್ದ ಪ್ರಸಾದ ಬಲಿಪರಿಗೆ ಅವರ ತಂದೆ ಬಲಿಪ ನಾರಾಯಣ ಭಾಗವತರೇ ಗುರುವಾಗಿದ್ದರು. 17ರ ಹರೆಯದಲ್ಲೇ ಕಟೀಲು ಮೇಳದಲ್ಲಿ ಭಾಗವತಿಕೆ ಆರಂಭಿಸಿ ಪ್ರಧಾನ ಭಾಗವತರಾಗಿ ಬೆಳೆದಿದ್ದರು.
ಪ್ರಸಾದ ಬಲಿಪರು ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ ಸೇರಿದಂತೆ ಏರು ಪದ್ಯಗಳ ಮೂಲಕ ಬಲಿಪ ಪರಂಪರೆಯ ಶೈಲಿಯ ಪ್ರತಿನಿಧಿಯಾಗಿ ಭಾಗವತನ ಸ್ಥಾನ ತುಂಬಿದ್ದರು.
ಮೂರು ದಶಕಗಳಿಂದ ಪ್ರಸಿದ್ಧ ಬಲಿಪ ಶೈಲಿಯ ಭಾಗವತಿಕೆಯ ಸಾಂಪ್ರದಾಯಿಕ ಶೈಲಿಯನ್ನು ಮುಂದುವರಿಸಿ ಅನೇಕ ಅಭಿಮಾನಿಗಳನ್ನು ಹೊಂದಿದ್ದರು. ಪೌರಾಣಿಕ ಪ್ರಸಂಗಗಳಲ್ಲಿ ಅದ್ಭುತ ಹಿಡಿತ ಹೊಂದಿದ್ದ ಇವರು ತಂದೆಯ ಬಳಿಕ ಬಲಿಪ ಶೈಲಿಯ ಭಾಗವತಿಕೆ ಮೂಲಕ ಮಿಂಚಿದ್ದರು. ತಂದೆ, ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಇವರು ಹಿರಿಯ ಯಕ್ಷಗಾನ ಅರ್ಥಧಾರಿ ದಿವಂಗತ ಬೊಂಡಾಲ ರಾಮಣ್ಣ ಶೆಟ್ಟಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ‘ಬೊಂಡಾಲ ಪ್ರಶಸ್ತಿ’ಗೆ ಕಟೀಲು ಮೇಳದ ಮುಖ್ಯಸ್ಥ ಪ್ರಸಾದ್ ಬಲಿಪ ಭಾಗವತ ಆಯ್ಕೆಯಾಗಿ, ಫೆಬ್ರವರಿ 18,2022 ರಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.