ಬಂಟ್ವಾಳ: ಸಮಾಜಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಡಾ. ಅಮ್ಮೆಂಬಳ ಬಾಳಪ್ಪರು ಅಂದು ಮಾಡಿದ ಕೆಲಸಗಳು ಇಂದು ಮಾತನಾಡುತ್ತಿವೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಹೇಳಿದರು.
ಅವರು ಬಂಟ್ವಾಳ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಕಸಾಪ ಬಂಟ್ವಾಳ ಘಟಕ ಏರ್ಪಡಿಸಿದ ಸ್ವಾತಂತ್ರ್ಯಯೋಧ ಡಾ. ಅಮ್ಮೆಂಬಳ ಬಾಳಪ್ಪ ಅವರ ಶತಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಮಾತನಾಡಿದರು.
ಬಾಳಪ್ಪರಂತ ಮೇರುಸಾಧಕರ ಪರಿಚಯ ಶಾಲೆ ವಿದ್ಯಾರ್ಥಿಗಳಿಗೂ ಅರಿವಾಗುವಂತೆ ಅವರ ಕುರಿತ ಪುಟ್ಟ ಉಪನ್ಯಾಸ ಬಳಿಕ ರಸಪ್ರಶ್ನೆ ಏರ್ಪಡಿಸುವಂಥ ಕಾರ್ಯವನ್ನು ಮುಂದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮಾಡಲಿದೆ ಎಂದು ಅವರು ಹೇಳಿದರು.
ಸಂಸ್ಮರಣಾ ಭಾಷಣಗೈದ ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ರವರು, ಬಾಳಪ್ಪ ಅವರ ತತ್ವಗಳ ಸ್ಮರಣೆ ಇಂದು ಆಗಬೇಕು, ಸಮಕಾಲೀನ ಸನ್ನಿವೇಶದಲ್ಲಿ ಅವರ ಕಾರ್ಯಗಳ ಮಹತ್ವ ಗೊತ್ತಾಗುತ್ತಿದೆ, ಅವರು ಇಡೀ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದವರು ಎಂದರು.
ಕಸಾಪ ಬಂಟ್ವಾಳ ಘಟಕಾಧ್ಯಕ್ಷ ವಿಶ್ವನಾಥ ಬಂಟ್ವಾಳ್, ಸ್ವಾತಂತ್ರ್ಯ ಯೋಧ ಡಾlಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ, ಬಂಟ್ವಾಳ ಕಾರ್ಯದರ್ಶಿ ಉಮೇಶ್ ಪಿ.ಕೆ, ಭಾರತ ಸೇವಾದಳ ಬಂಟ್ವಾಳ ತಾಲೂಕು ಅಧ್ಯಕ್ಷ ಶೇಷಪ್ಪ ಮೂಲ್ಯ ಅವರು ಬಾಳಪ್ಪ ಅವರನ್ನು ಸ್ಮರಿಸಿದರು.
ಕಸಾಪ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಸ್ವಾಗತಿಸಿದರು. ಮತ್ತೋರ್ವ ಗೌರವ ಕಾರ್ಯದರ್ಶಿ ವಿ.ಸು.ಭಟ್ ವಂದಿಸಿದರು. ಅಬುಬಕ್ಕರ್ ಅಮ್ಮುಂಜೆ ನಾಡಗೀತೆ ಹಾಡಿದರು. ಪತ್ರಕರ್ತ ಹರೀಶ ಮಾಂಬಾಡಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಕಸಾಪ ಸದಸ್ಯತ್ವ ಅಭಿಯಾನ ನಡೆಯಿತು.