ಬೆಳ್ತಂಗಡಿ: ವೃಷಭ ಮಾಸದ 10ನೇ ದಿನ ಪತ್ತನಾಜೆ ಎಂದೇ ಕರಾವಳಿ ಜಿಲ್ಲೆಗಳಲ್ಲಿ ಪ್ರಸಿದ್ಧವಾಗಿ ದೇವಸ್ಥಾನ,ದೈವಸ್ಥಾನಗಳಲ್ಲಿ ವಾರ್ಷಿಕ ಉತ್ಸವ,ಜಾತ್ರೆ,ವಿಶೇಷ ಸೇವೆಗಳು ಸಮಾಪನಗೊಳ್ಳುವ ದಿನ.
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತೀಕ ಮಾಸದ ದೀಪೋತ್ಸವದೊಂದಿಗೆ ಪ್ರಾರಂಭಗೊಳ್ಳುವ ಉತ್ಸವ,ವಿಶೇಷ ಸೇವೆಗಳು ಪತ್ತನಾಜೆಯಂದು ಕೊನೆಗೊಳ್ಳುತ್ತವೆ. ಮೇ 24 ರಂದು ಪತ್ತನಾಜೆ ಪ್ರಯುಕ್ತ ಕ್ಷೇತ್ರದಲ್ಲಿ ಶ್ರೀ ಸ್ವಾಮಿಯ ವಾರ್ಷಿಕ ರಂಗಪೂಜೆ,ಉತ್ಸವ ,ದರ್ಶನ ಬಲಿ , ಧ್ವಜ ಮರ ಇಳಿಸುವುದರೊಂದಿಗೆ ದೇವರು ಒಳಗಾಗುವ ಧಾರ್ಮಿಕ ಪ್ರಕ್ರಿಯೆಗಳು ಧರ್ಮಾಧಿಕಾರಿ ಡಾ!ಡಿ .ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ವಿದ್ಯುಕ್ತವಾಗಿ ನಡೆಯಿತು.
ಮುಂದಿನ ಕಾರ್ತೀಕ ಮಾಸದ ವರೆಗೆ ಕ್ಷೇತ್ರದಲ್ಲಿ ನಿತ್ಯ ನೈಮಿತ್ತಿಕ ಪೂಜಾ ಕಾರ್ಯಗಳನ್ನು ಹೊರತುಪಡಿಸಿ ಯಾವುದೇ ವಿಶೇಷ ಸೇವೆಗಳು ನಡೆಯುವುದಿಲ್ಲ.ತಾಲೂಕಿನ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ,ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ ಮತ್ತಿತರ ದೇವಸ್ಥಾನಗಳು ಹಾಗು ದೈವಸ್ಥಾನಗಳಲ್ಲಿ ಪತ್ತನಾಜೆಯಂದು ಉತ್ಸವ,ವಿಶೇಷ ಸೇವೆಗಳು ಸಮಾಪನಗೊಂಡವು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ವಾರ್ಷಿಕ ತಿರುಗಾಟ ಪತ್ತನಾಜೆಯಂದು ಕ್ಷೇತ್ರದಲ್ಲಿ 3 ದಿನಗಳ ಸೇವೆಯಾಟದೊಂದಿಗೆ ಕೊನೆಗೊ ಳ್ಳುತ್ತದೆ.
ಮೇಳದ ಶ್ರೀ ಮಹಾಗಣಪತಿಯನ್ನು ಪತ್ತನಾಜೆಯಂದು ಸಂಜೆ ಮಣೆಗಾರರ ಮನೆಯಿಂದ ಕ್ಷೇತ್ರದ ಸಕಲ ಗೌರವಗಳೊಂದಿಗೆ ವೈಭವಪೂರ್ಣ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ವಿಶೇಷ ಚೆಂಡೆವಾದನ,ವಾಲಗ ಮೇಳ, ಹೂವಿನಕೋಲು ಕುಣಿತ,ಆನೆಗಳು,ಬಸವ, ತಟ್ಟಿರಾಯ ಜಾಗಂಟೆವಾದನಗಳೊಂದಿಗೆ ಶ್ರೀ ಮಹಾಗಣಪತಿಯನ್ನು ನರ್ತನ ಸೇವೆಯಲ್ಲಿ ಗೌರವಪೂರ್ವಕ ಬರಮಾಡಿಕೊಳ್ಳಲಾಯಿತು . ಶ್ರೀ ಮಹಾಗಣಪತಿಯನ್ನು ಛತ್ರ ಗಣಪತಿ ಸನ್ನಿಧಿಯ ಗರ್ಭಗುಡಿಯಲ್ಲಿರಿಸಿ ಮಹಾಮಂಗಳಾರತಿ ಬೆಳಗಲಾಯಿತು.
ಧರ್ಮಾಧಿಕಾರಿ ಡಾ! ಡಿ.ವೀರೇಂದ್ರ ಹೆಗ್ಗಡೆಯವರು,ಕುಟುಂಬಸ್ಥರು ,ಪಾರುಪತ್ಯದಾರ ಲಕ್ಸ್ಮಿನಾರಾಯಣ ರಾವ್, ಸೀತಾರಾಮ ತೋಳ್ಪಡಿತ್ತಾಯ,ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆ,ಮೇಳದ ಕಲಾವಿದರು,ಸಿಬ್ಬಂದಿಗಳು, ಊರ ಪರವೂರ ಭಕ್ತಾದಿಗಳು ಶ್ರೀ ಮಹಾಗಣಪತಿಯ ವೈಭವಪೂರ್ಣ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ರಾತ್ರಿ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಯಕ್ಷಗಾನ ಸೇವೆಯಾಟ ಪ್ರದರ್ಶಿಸಲ್ಪಟ್ಟಿತು . (ಚಿತ್ರ: ಯಕ್ಷಗಾನ ಮೇಳದ ಮಹಾಗಣಪತಿಯನ್ನು ವೈಭವ ಪೂರ್ಣ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.