ಮಂಗಳೂರು : ನಗರದ ಕೊಟ್ಟಾರ ಚೌಕಿ ಸಮೀಪದ ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ಪ್ರಣವ್ ಎಸ್. ಮುಂಡಾಸ (17) ಮೃತಪಟ್ಟ ವಿದ್ಯಾರ್ಥಿ. ಈತ ವಿಜಯಪುರದ ಸತೀಶ್ ಅವರ ಪುತ್ರನಾಗಿದ್ದು, ನಗರದ ಕೊಟ್ಟಾರ ಚೌಕಿಯ ಚೈತನ್ಯ ಟೆಕ್ನೊ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಎಂದು ತಿಳಿದು ಬಂದಿದೆ.
ಕೆಲವು ಮಕ್ಕಳು ಕ್ರಿಕೆಟ್ ಆಟವಾಡುತ್ತಿದ್ದು, ಈ ವೇಳೆ ಹಾಸ್ಟೆಲ್ ಕಟ್ಟಡದ ಮೇಲೆ ಚೆಂಡು ಬಿದ್ದಿತ್ತು. ಕಟ್ಟಡದ ನಾಲ್ಕನೇ ಮಹಡಿಯಲ್ಲಿದ್ದ ಪ್ರಣವ್ ಅದನ್ನು ತರುವ ಸಲುವಾಗಿ ಮಹಡಿಗೆ ಅಳವಡಿಸಲಾದ ಶೀಟ್ಗೆ ಏರಿದ್ದು, ಈ ಸಂದರ್ಭದಲ್ಲಿ ಅಲ್ಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.