ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಧರ್ಭದಲ್ಲಿ ಧರ್ಮಸ್ಥಳ ಹೇಮಾವತಿ ವೀ. ಹೆಗ್ಗಡೆಯವರ ಮಹಿಳಾಪರ ನಿಲುವುಗಳು ವಿಚಾರಗೋಷ್ಠಿ ಮತ್ತು ಅವರ ಗೆಳತಿ ಹಾಗೂ ಮಗಳಿಗೊಂದು ಪತ್ರ ಕೃತಿಗಳ ಲೋಕಾರ್ಪಣೆ ಇಂದು ಪೂರ್ವಾಹ್ನ ೯-೩೦ ರಿಂದ ೧-೧೫ರವರೆಗೆ ನಡೆಯಲಿದೆ.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎರಡು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮೊದಲ ಗೋಷ್ಠಿಯಲ್ಲಿ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ- ಹೇಮಾವತಿ ವೀ.ಹೆಗ್ಗಡೆಯವರ ನಿಲುವುಗಳು ಎಂಬ ಬಗ್ಗೆ ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ| ಶುಭಾ ಮರವಂತೆ, ಸಾಹಿತಿ ಹಂಪನಾ, ಕನ್ಯಾಕುಮಾರಿ ಯುವಕ ಮಂಡಲ ಕಾರ್ಯಕರ್ತೆ ಭವಾನಿ ವಿ. ರಾವ್ ಅವರು ವಿಚಾರ ಮಂಡಿಸಲಿದ್ದಾರೆ.
ಬಳಿಕ ಹೇಮಾವತೀ ವೀ. ಹೆಗ್ಗಡೆ ಅವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ರಂಗಶಿವ ಕಲಾ ಬಳಗ ಧರ್ಮಸ್ಥಳ ಇವರು ಪುಕ್ಕಟೆ ಸಲಹೆ ಎಂಬ ನಾಟಕ ಪ್ರಸ್ತುತ ಪಡಿಸಲಿದ್ದಾರೆ.
ನಂತರ ನಡೆಯುವ ಎರಡನೇ ಗೋಷ್ಠಿಯಲ್ಲಿ ಉಜಿರೆ ಎಸ್.ಡಿ.ಎಂ.ಕಾಲೇಜಿನ ರಾಜ್ಯಶಾಸ್ತç ವಿಭಾಗ ಮುಖ್ಯಸ್ಥೆ ಡಾ| ಶಲೀಪ್ ಎ.ಪಿ., ಶ್ರೀ ಕ್ಷೇ. ಧ.ಗ್ರಾ.ಯೋ. ಶಿವಮೊಗ್ಗ ಇದರ ನಿರ್ದೇಶಕಿ ಗೀತಾ, ಚಿತ್ರದುರ್ಗ ಮಾರಘಟ್ಟ ವಿನಾಯಕ ಸ್ವಸಹಾಯ ಸಂಘದ ಸದಸ್ಯೆ ದೀಪಿಕಾ ಬಾಬು ಇವರುಗಳು ಮಹಿಳಾ ಸಬಲೀಕರಣ- ಹೇಮಾವತಿ ವೀ. ಹೆಗ್ಗಡೆಯವರ ನಿಲುವುಗಳು ಎಂಬ ವಿಚಾರದ ಬಗ್ಗೆ ವಿವರಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಪತ್ರಕರ್ತೆ ಡಾ| ಸಂಧ್ಯಾ ಎಸ್.ಪೈ ಕೃತಿಗಳ ಬಿಡುಗಡೆ ಮಾಡಲಿದ್ದಾರೆ. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಹೇಮಾವತಿ ಹೆಗ್ಗಡೆಯವರು ತಮ್ಮ ಕೃತಿಗಳ ಕುರಿತು ಮಾತನಾಡಲಿದ್ದಾರೆ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಉಪಸ್ಥಿತರಿರಲಿದ್ದಾರೆ.