ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ರಾತ್ರಿ ಸುರಿದ ಗಾಳಿ-ಮಳೆಗೆ ಹಲವೆಡೆ ಮರ-ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಹಳ್ಳ-ತೊರೆಗಳು ತುಂಬಿ ಹರಿಯುತ್ತಿವೆ.
ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಪುತ್ತೂರು, ಕಡಬ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯ ಹಿನ್ನಲೆಯಲ್ಲಿ ತಗ್ಗು ಪ್ರದೇಶದ ಅಡಿಕೆ ತೋಟಗಳು ಜಲಾವೃತಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸ್ನಾನಘಟ್ಟ ಮುಳುಗಡೆಗೊಂಡಿದೆ.
ಇನ್ನು ಜುಲೈ 28ರವರೆಗೂ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ನೇತ್ರಾವತಿ, ಕುಮಾರಾಧಾರಾ ನದಿಗಳಲ್ಲೂ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು ಭಕ್ತರಿಗೆ ಸ್ನಾನಘಟ್ಟದ ಕಡೆ ತೆರಳದಂತೆ ಸೂಚನೆ ನೀಡಲಾಗಿದೆ.
ಇನ್ನು ರಾತ್ರಿ ಸುರಿದ ಮಳೆಗೆ ಶನಿವಾರ ರಾತ್ರಿ ಕಾರ್ಕಳದ ಐತಿಹಾಸಿಕ ಹಿನ್ನಲೆಯ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಕಟ್ಟಡದ ಚಂದ್ರಶಾಲೆಯ ಒಂದು ಪಾರ್ಶ್ವ ಭಾಗ ಕುಸಿತಗೊಂಡಿದೆ. ಇತ್ತ ಮಂಗಳೂರಿನ ಲೇಡಿಹಿಲ್ ಬಳಿ ರಾತ್ರಿ ಸುರಿದ ಧಾರಾಕಾರ ಮಳೆಗೆ ನಾರಾಯಣಗುರು ಸರ್ಕಲ್ ಬಳಿ ಬೃಹತ್ ಗಾತ್ರದ ಆಲದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ.
ಮಂಗಳೂರಿನ ಮುಗೇರ ಕುದ್ರು ಪ್ರದೇಶ ನೆರೆಯಿಂದಾಗಿ ಜಲಾವೃಗೊಂಡಿದೆ. ಫಲ್ಗುಣಿ ನದಿ ನೀರಿನ ಪ್ರಮಾಣ ಹೆಚ್ಚಳವಾಗಿ ಜನವಸತಿ ಪ್ರದೇಶಕ್ಕೆ ನದಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಊರು ಮುಳುಗಡೆಯಾದ ಹಿನ್ನಲೆಯಲ್ಲಿ ಗ್ರಾಮಸ್ಥರು ದೋಣಿಯ ಮೊರೆ ಹೋಗುತ್ತಿದ್ದಾರೆ. ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.