ಬೆಳ್ತಂಗಡಿ : “ ದೇವರ ಭಕ್ತಿ, ಭಜನೆ, ಸತ್ಸಂಗ ಮತ್ತು ಒಳ್ಳೆಯ ಜೀವನ ಮಾಡುತ್ತಿರುವ ಜನರ ಸಹವಾಸದಿಂದ ನಮ್ಮ ಜೀವನ ಕ್ರಮ ಬದಲಾಗುತ್ತದೆ ಹಾಗೂ ಮನಸ್ಸು ದೃಢಸಂಕಲ್ಪವನ್ನು ಮಾಡಲು ಸಾಧ್ಯವಾಗುತ್ತದೆ. ಚಂಚಲ ಮನಸ್ಸಿನವನಿಗೆ ಕುಡಿತ ಬಿಡಲು ಸಾಧ್ಯವಾಗುವುದಿಲ್ಲ. ದೃಢ ನಿರ್ಧಾರ ಮಾಡಿದವನಿಗೆ ಇದು ಸಾಧ್ಯ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಅವರು ಸೋಮವಾರ ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ಮದ್ಯವರ್ಜನದ ಚಿಕಿತ್ಸೆ ಪಡೆದ 162ನೇ ವಿಶೇಷ ಮದ್ಯವರ್ಜನ ಶಿಬಿರದ 59 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸಂಸಾರದಲ್ಲಿ ಕಷ್ಟ, ಸುಖ, ದು:ಖ, ನೋವುಗಳು ಸ್ವಾಭಾವಿಕವಾಗಿ ಇರುತ್ತದೆ. ಇವುಗಳಿಗೆಲ್ಲ ಮದ್ಯಪಾನ ಮಾಡುವುದು ಪರಿಹಾರವಲ್ಲ” ಎಂದು ಅವರು ತಿಳಿಸಿದರು.
ಮದ್ಯಪಾನದ ಪಿಡುಗಿಗೆ ಶಾಶ್ವತವಾದ ಜಾಗೃತಿ ಬೇಕು.
“ನಾನು ಸೋತಿದ್ದೇನೆ, ನಾನು ಗೆಲ್ಲಬೇಕು ಎನ್ನುವ ಎರಡು ಆಲೋಚನೆಗಳಿಗೆ ಮನುಷ್ಯರು ಮದ್ಯಪಾನ ಮಾಡುತ್ತಾರೆ. ಗೆದ್ದಾಗ ಸಂತೋಷ ಆಚರಿಸಲಿಕ್ಕೆ, ದು:ಖ ಆದಾಗ ದು:ಖವನ್ನು ಮರೆಯುವುದಕ್ಕೆ ಕುಡಿಯುವ ಚಟಕ್ಕೆ ಮೊರೆ ಹೋಗುತ್ತಾರೆ. ಇದನ್ನು ಎರಡನ್ನೂ ಬಿಟ್ಟು ಈ ಸಂತೋಷ ಮತ್ತು ದು:ಖಕ್ಕೆ ನಾವು ಏನು ಮಾಡಬಹುದು ಎಂಬ ವ್ಯಾಖ್ಯಾನವನ್ನು ಕಂಡುಹುಡುಕಬೇಕು. ಈ ಪಿಡುಗಿನ ಬಗ್ಗೆ ಶಾಶ್ವತವಾದ ಜಾಗೃತಿ ಬೇಕು.
– ಡಾ| ಡಿ. ವೀರೇಂದ್ರ ಹೆಗ್ಗಡೆ
ಕೋವಿಡ್ ಕಾರಣಕ್ಕಾಗಿ ಕಳೆದ 4 ತಿಂಗಳಿನಿಂದ ಮದ್ಯವರ್ಜನ ಶಿಬಿರಗಳನ್ನು ಕೇಂದ್ರದಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ಅಕ್ಟೋಬರ್ ತಿಂಗಳಿನಲ್ಲಿ ಉಜಿರೆಯ ವ್ಯಸನಮುಕ್ತಿ ಕೇಂದ್ರದಲ್ಲಿ ವಿಶೇಷ ಶಿಬಿರ ಪ್ರಾರಂಭಗೊಂಡಿದ್ದು, ಈ ಶಿಬಿರದಲ್ಲಿ ಕರ್ನಾಟಕ ರಾಜ್ಯದ ವಿವಿಧ ಕಡೆಗಳ ಪ್ರತಿಷ್ಠಿತ ಕುಟುಂಬದ 59 ಮಂದಿ ಗೌಪ್ಯವಾಗಿ ಮದ್ಯಪಾನದಿಂದ ಬಿಡುಗಡೆ ಹೊಂದಬೇಕೆಂಬ ಆಕಾಂಕ್ಷೆಯಿಂದ ಬಂದಿರುತ್ತಾರೆ. ವೈದ್ಯಾಧಿಕಾರಿಗಳಾದ ಡಾ| ಕರಿಷ್ಮಾ, ಡಾ| ಮೋಹನ್ದಾಸ್ ಗೌಡ ಶಿಬಿರಾರ್ಥಿಗಳ ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿರುತ್ತಾರೆ. ಮುಖ್ಯವಾಗಿ ಇವರನ್ನು ಸಂಪೂರ್ಣ ಚಿಕಿತ್ಸೆಗೆ ಹೊಂದಿಕೊಳ್ಳುವಂತೆ ಮಾಡಲು ದೇಹ ಮತ್ತು ಮನಸ್ಸಿನ ಮೇಲಾದ ಕೆಟ್ಟ ಪರಿಣಾಮಗಳಿಗೆ ಸಲಹೆ ಮತ್ತು ಚಿಕಿತ್ಸೆಗಳನ್ನು ನೀಡಿ ಪರಿವರ್ತನೆಗೆ ಸಹಕಾರಿಯಾಗಲು ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕೆ.ಎಸ್.ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ಇಲ್ಲಿನ ಮನೋವೈದ್ಯರು ಶಿಬಿರಾರ್ಥಿಗಳ ಸಂಪೂರ್ಣ ಯೋಗಕ್ಷೇಮ ಚಿಂತನೆಯೊಂದಿಗೆ ವಿಮರ್ಶೆ ನಡೆಸಿ ಚಿಕಿತ್ಸೆ ನಡೆಸುತ್ತಿದ್ದಾರೆ.
ಕಾರ್ಯಕ್ರಮದ ಸಮಾರೋಪವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಶಿರಾ ಜಿಲ್ಲೆಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಸ್.ಕೆ. ರಾಮಚಂದ್ರ ಗುಪ್ತ ಮತ್ತು ಪದಾಧಿಕಾರಿಗಳು, ಶಿರಾ ಜಿಲ್ಲಾ ನಿರ್ದೇಶಕ ದಿನೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಮುಖ್ಯ ನಿರ್ವಹಣಾಧಿಕಾರಿ ಎಸ್.ಎಸ್.ಅನಿಲ್ ಕುಮಾರ್ ರವರು ಕುಟುಂಬದ ದಿನದ ಅಂಗವಾಗಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ, ಪ್ರೇರಣೆ ನೀಡಿದರು. ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಹೆಚ್. ಮಂಜುನಾಥ್ರವರು ಮಾರ್ಗದರ್ಶನ ನೀಡಿರುತ್ತಾರೆ. ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಸ್ ಶಿಬಿರದ ನೇತೃತ್ವ ವಹಿಸಿದ್ದು, ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿಗಳಾದ ನಂದಕುಮಾರ್, ದೇವಿಪ್ರಸಾದ್, ನಾಗರಾಜ್ ಆರೋಗ್ಯ ಸಹಾಯಕರಾದ ಫಿಲೋಮಿನಾ ಡಿ’ಸೋಜ, ವೆಂಕಟೇಶ್ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:18.10.2021 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.