ಬೆಳ್ತಂಗಡಿ: ನಾಟಕೋತ್ಸವದ ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ. ಹೀಗಾಗಿ ಜಿಲ್ಲಾ ಮಟ್ಟದ ಕಲಾವಿದರನ್ನು ತರಿಸಿ ಉಜಿರೆಯಲ್ಲಿ ನಾಟಕೋತ್ಸವ ಆಯೋಜಿಸಿರುವುದು ಪ್ರಶಂಸನೀಯ. ಹಾಸ್ಯಪ್ರಧಾನವಾಗಿದ್ದ ತುಳು ನಾಟಕ ರಂಗವಿಂದು ಸಿನೆಮಾ ಕ್ಷೇತ್ರದಲ್ಲೂ ಬೆಳೆಯುತ್ತಿರುವುದು ಅಭಿನಂದನಾರ್ಹ. ಉಜಿರೆಯಲ್ಲಿ ನಾಟಕ ಪ್ರದರ್ಶನಕ್ಕೂ ಮುಂದಿನ ದಿನಗಳಲ್ಲಿ ವೇದಿಕೆಗೆ ಅವಕಾಶ ಸೃಷ್ಟಿಸುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್ಕೃಷ್ಣ ಪಡುವೆಟ್ನಾಯ ಹೇಳಿದರು.
ಮಂದಾರ ಕಲಾವಿದರು ಉಜಿರೆ ನೇತೃತ್ವದಲ್ಲಿ ಉಜಿರೆ ಶಾರದಾ ಮಂಟಪದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ತುಳು ನಾಟಕೋತ್ಸವ ಮಂದಾರ ಪ್ರಶಸ್ತಿ -೨೦೨೨ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಉಜಿರೆ ಸೇರಿದಂತೆ ಬೆಳ್ತಂಗಡಿ ತಾಲೂಕು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಅತ್ಯಧಿಕ ವೇದಿಕೆಯನ್ನು ಸೃಷ್ಟಿಸಿದೆ. ವರ್ಷವಿಡೀ ಸಂಗೀತ, ನಾಟಕ, ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತಿರುವ ಸಂದರ್ಭದಲ್ಲಿ ತುಳು ನಾಟಕಕ್ಕೆ ಇಂತಹಾ ಒಂದು ವೇದಿಕೆ ಅವಶ್ಯಕತೆಯಿತ್ತು. ಅದನ್ನು ಮಂದಾರ ಕಲಾವಿದರ ತಂಡ ಸಮರ್ಥವಾಗಿ ತುಂಬಿಸಿಕೊಟ್ಟಿದೆ ಎಂದು ಹೇಳಿದರು.
ತುಳು ಚಲನಚಿತ್ರ ನಟ, ಪ್ರಖ್ಯಾತ ನಾಟಕ ಕಲಾವಿದ ನವೀನ್ ಡಿ.ಪಡೀಲ್ ಮಾತನಾಡಿ, ಕಲಾವಿದರೆ ರಂಗಭೂಮಿಯ ಆಸ್ತಿ. ಒಂದು ಸಮಯದಲ್ಲಿ ನಾಟಕ ಎಂದರೆ ಲಕ್ಷಾಂತರ ಮಂದಿ ಸೇರುತ್ತಿದ್ದ ಕಾಲವಿತ್ತು. ಆದರೆ ಇಂದು ನೇರಪ್ರದರ್ಶನದಿಂದಾಗಿ ಕಲಾವಿದರು ಮನೆಯಲ್ಲೇ ಕೂತು ವೀಕ್ಷಣೆ ಮಾಡುವಂತಾಗಿದೆ. ಇದರಿಂದ ಕಲಾವಿದರಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ ಎಂದು ವಿಷಾದಿಸಿದ ಅವರು ಕಲಾಸೇವೆ ಮಾಡುತ್ತಿರುವ ತಂಡಕ್ಕೆ ಆಶೀರ್ವಾದ ಮಾಡಿ ಬೆಂಬಲಿಸಿದರೆ ಎಷ್ಟೋ ಮಂದಿ ಕಲಾವಿದರು ಬೆಳೆಯಲು ಸಾಧ್ಯ ಎಂದು ಹೇಳಿದರು.
ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಮಾತನಾಡಿ, ಮನಸ್ಸಿನ ನೋವನ್ನು ಮರೆಸಿ ಮನಸ್ಸಿಗೆ ಸಂತೋಷ ನೀಡುವುದು ನಾಟಕ. ನಾಟಕ ಕಲೆ ನಿತ್ಯನಿರಂತರವಾಗಿ ಬೆಳೆಯುವಲ್ಲಿ ಕಲಾವಿದರಿಗೆ ಪ್ರೋತ್ಸಾಹ ಅವಶ್ಯ ಎಂದರು.
ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ಕಲೆ ಅಭಿವೃದ್ಧಿಯಿಂದ ವ್ಯಕ್ತಿವಿಕಸನ ಸಾಧ್ಯ. ಶಿವರಾಮ ಕಾರಂತರಂತಹ ನಾಟಕ ಇಂದು ಅಗತ್ಯವಾಗಿದೆ. ಈ ಮೂಲಕ ಗುರು ಶಿಷ್ಯ ಪರಂಪರೆ ಬೆಳೆಯಲು ನಾಟಕರಂಗ ಪ್ರಾಧಾನ್ಯತರ ಪಡೆದಿದೆ. ಭಾಷೆ ಉಳಿಯಲು ಸಿನಿಮಾ, ರಂಗಭೂಮಿ ಅವಶ್ಯವಾಗಿದೆ.
ಈ ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಈವರೆಗೆ ರಂಗಾಯಣ ವೇದಿಕೆ ಕೊರತೆ ಕಾಡಿದೆ. ಜಿಲ್ಲೆಯಲ್ಲಿ ರಂಗಾಯಣ ವೇದಿಕೆ ಸ್ಥಾಪಿಸುವಲ್ಲಿ ಸರಕಾರ ಗಮನಹರಿಸಬೇಕು ಎಂದು ಹೇಳಿದರು.
ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ತುಳು ಚಲನಚಿತ್ರ ಹಾಸ್ಯ ನಟ ನವೀನ್ ಡಿ.ಪಡೀಲ್, ರಂಗ ಕಲಾವಿದ ಸುಂದರ ರೈ ಮಂದಾರ ಅವರನ್ನು ಸಮ್ಮಾನಿಸಲಾಯಿತು.
ಮುಂಡಾಜೆ ಯಂಗ್ ಚಾಲೆಂಜರ್ಸ್ ಸಂಚಾಲಕ ನಾಮದೇವ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ರಂಗ ಕಲಾವಿದ ಸುಂದರ ರೈ ಮಂದಾರ, ವೇಣೂರು ಗ್ರಾ.ಪಂ. ಅಧ್ಯಕ್ಷ ವಿ.ಎನ್.ಕುಲಾಲ್, ಕಾರ್ಯಕ್ರಮದ ಸಂಚಾಲಕ ಪ್ರವೀಣ್ ಉಪಸ್ಥಿತರಿದ್ದರು.
ಬಳಿಕ ಮಾನಸ ಕಲಾವಿದರು ಪುತ್ತೂರು ಅಭಿನಯದ ಬಂಗಾರ್ ಬಾಬು ತುಳು ಹಾಸ್ಯಮಯ ನಾಟಕ ನಡೆಯಿತು.
ಶಿಕ್ಷಕ ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಮಂದಾರ ಕಲಾವಿದರು ಉಜಿರೆ ಅಧ್ಯಕ್ಷ ಗುಣಪಾಲ್ ಎಂ.ಎಸ್. ಸ್ವಾಗತಿಸಿ, ಪ್ರಾಸ್ತಾವಿಸಿದರು.