ಬಂಟ್ವಾಳ: ದೇಶದಲ್ಲಿ ಜಗತ್ತಿಗೆ ಒಳಿತು ಬಯಸುವ ಹಿಂದೂ ಸಮಾಜ ಒಟ್ಟಾದರೆ ಮಾತ್ರ ರಾಮರಾಜ್ಯ ನಿರ್ಮಾಣ ಸಾಧ್ಯವಾಗುತ್ತದೆ. ಪ್ರಸಕ್ತ ಹಿಜಾಬ್ ವಿವಾದವು ಈ ಹಿಂದೆ ನಡೆದ ದೇಶ ವಿಭಜನೆಯಂತೆ ವಿಷಬೀಜ ಬಿತ್ತುವ ವಿಫಲ ಪ್ರಯತ್ನ ನಡೆಯುತ್ತಿದೆ. ಕೇಸರಿ ಎಂಬುದು ದೇಶದ ನೈಜ ಬಣ್ಣವಾಗಿದ್ದು, ಇಲ್ಲಿನ ರಾಜಕಾರಣಿಗಳು ಜಾತ್ಯಾತೀತತೆ ನೆಪದಲ್ಲಿ ದೇಶ ವಿಭಜನೆಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.
ಇಲ್ಲಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಸಲ್ಲದು ಎಂದರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನದ ಬ್ರಹ್ಮಕಲಶೋತ್ಸವ ಕ್ಕೆ ಪೂರಕವಾಗಿ ಗ್ರಾಮದಲ್ಲಿ 1ಕೋಟಿ ಅನುದಾನದ ಅಭಿವೃದ್ಧಿ ಕಾರ್ಯನಡೆಸಿರುವುದಾಗಿ ತಿಳಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಜಿಲ್ಲೆಯಲ್ಲಿ ಭೂಮಸೂದೆ ಕಾಯ್ದೆ ಬಳಿಕ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗಿದ್ದು, ತಾನು ಅವಕಾಶ ಸಿಕ್ಕಾಗಲೆಲ್ಲಾ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಗೆ ಶ್ರಮಿಸಿರುವುದಾಗಿ ತಿಳಿಸಿದರು.
ಕನಪಾಡಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮಾನಾಥ ರೈ ಕುಪ್ಪಿಲಗುತ್ತು, ವಿನೋದ ಭೋಜ ಮೂಲ್ಯ, ವ್ವವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಮೇಶ ಉಪಾಧ್ಯಾಯ ನೆತ್ತರಕೆರೆ, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ಪ್ರಧಾನ ಕಾರ್ಯದರ್ಶಿ ಗಣೇಶ ಸುವರ್ಣ ತುಂಬೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ ಇದ್ದರು. ಇದೇ ವೇಳೆ ಸ್ಥಳದಾನಿ ವಿನೋದ ಭೋಜ ಮೂಲ್ಯ ಇವರನ್ನು ಸನ್ಮಾನಿಸಲಾಯಿತು.
ಸಮಿತಿ ಸಂಚಾಲಕ ಟಿ.ತಾರನಾಥ ಕೊಟ್ಟಾರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಸದಸ್ಯ ಸತೀಶ ಶೆಟ್ಟಿ ಮೊಡಂಕಾಪುಗುತ್ತು ವಂದಿಸಿದರು. ದಿನೇಶ ಸುವರ್ಣ ರಾಯಿ ಮತ್ತು ಚೇತನ್ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.