ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಮಠದ ಮಜಲು ಅನಂತ್ ರಾವ್ ಅವರ ತೋಟಕ್ಕೆ ಸೋಮವಾರ ತಡರಾತ್ರಿ ದಾಳಿ ನಡೆಸಿದ ಕಾಡಾನೆ 80 ಅಡಕೆ ಮರ, 5 ತೆಂಗಿನ ಮರ ಹಾಗೂ ಅನೇಕ ಬಾಳೆ ಗಿಡಗಳನ್ನು ನಾಶ ಮಾಡಿವೆ.
ಶನಿವಾರ ರಾತ್ರಿ ಕೂಡ ಇವರ ತೋಟಕ್ಕೆ ದಾಳಿ ನಡೆಸಿದ್ದ ಕಾಡಾನೆಗಳ 50ಅಡಕೆ ಮರ, ಎರಡು ತೆಂಗು ಹಾಗೂ ಬಾಳೆಗಿಡಗಳನ್ನು ಧ್ವಂಸ ಮಾಡಿತ್ತು.ಇದೀಗ ಮತ್ತೆ ಎರಡು ದಿನಗಳ ಬಳಿಕ ದಾಳಿ ಮುಂದುವರೆದಿದೆ. ಸುಮಾರು ಮೂರು ತಿಂಗಳ ಹಿಂದೆ ಇವರ ತೋಟಕ್ಕೆ ದಾಳಿ ನಡೆಸಿದ್ದ ಗಜಪಡೆ ಅಪಾರ ಕೃಷಿ ನಾಶಕ್ಕೆ ಕಾರಣವಾಗಿತ್ತು.
ಇಲ್ಲಿ ಮಂಗಳವಾರ ಹಾನಿ ಪ್ರಮಾಣ ಅಂದಾಜಿಸುವಾಗ ಮೂರರಿಂದ ಐದು ಕಾಡಾನೆಗಳು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಕಾಡಾನೆಗಳ ಹಿಂಡು ದಾಳಿ ನಡೆಸಿರುವ ಸಂಶಯ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಎರಡು ತಿಂಗಳ ಹಿಂದೆ ಒಂಟಿ ಸಲಗ ಹಾಗೂ ಕಾಡಾನೆಗಳ ಹಿಂಡು ಕಂಡು ಬಂದಿತ್ತು.