ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಐತಿಹಾಸಿಕ ಕೆರೆಗೆ ಕಿಡಿಗೇಡಿಗಳು ವಿಷ ಬೆರೆಸಿಯೋ ಅಥವಾ ಹರಿಸಿದ ಮಲಿನ ನೀರಿನಿಂದಲೋ ಕೆರೆಯಲ್ಲಿರುವ ಲಕ್ಷಾಂತರ ಮೀನುಗಳ ಮಾರಣ ಹೋಮವಾಗಿರುವ ವಿಚಾರ ಮಾರ್ಚ್ 13ರಂದು ಬೆಳಕಿಗೆ ಬಂದಿದ್ದು, ಇದೀಗ ಕೆರೆಯ ಸುತ್ತಲಿನ ಪರಿಸರ ದುರ್ವಾಸನೆಯಿಂದ ಕೂಡಿದೆ.
ಮೀನುಗಳ ಮಾರಣ ಹೋಮ ನಡೆದು ದಿನಗಳೆರಡು ಕಳೆದರೂ ತಾಲೂಕು ಆಡಳಿತ ಸತ್ತ ಮೀನುಗಳ ವಿಲೇವಾರಿಗೆ ಯಾವೊಂದು ಕ್ರಮಕ್ಕೂ ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಗುರುವಾಯನಕೆರೆ ಪರಿಸರದಲ್ಲಿ ಸತ್ತ ಮೀನುಗಳಿಂದ ಹರಡುವ ದುರ್ನಾತ ಬೀರುತ್ತಿದ್ದು, ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಸಿದೆ.
ಇದ್ದುದರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಆಡಳಿತ ತನ್ನ ಇತಿಮಿತಿಯೊಳಗೆ ಕಾರ್ಯಾಚರಿಸುತ್ತಿದ್ದು, ಸೂಕ್ತ ಕ್ರಮಕ್ಕಾಗಿ ತಾಲೂಕು ಆಡಳಿತ ಹಾಗೂ ಮೀನುಗಾರಿಕಾ ಇಲಾಖೆಯ ಸಹಕಾರಕ್ಕಾಗಿ ಕಾಯುತ್ತಿದೆ.
ಕೆರೆಯ ನೀರು ವಿಷಮಯವಾಗಿ ಲಕ್ಷಾಂತರ ಮೀನುಗಳ ಮಾರಣ ಹೋಮವಾಗಲು ನೈಜ ಕಾರಣ ತಿಳಿಯಲು ಸೂಕ್ತ ತನಿಖೆಯ ಅಗತ್ಯವಿದೆ. ಕುವೆಟ್ಟು ಗ್ರಾಮ ಪಂಚಾಯತ್ ಆಡಳಿತ ಯಾವ ಅಥವಾ ಯಾರ ಒತ್ತಡಕ್ಕೂ ಮಣಿಯದೇ ಕಡಕ್ ನಿರ್ಣಯ ಕೈಗೊಂಡು ಈ ಬಗ್ಗೆ ಮುಂದುವರಿದೀತೇ ಎಂದು ಕಾದು ನೋಡಬೇಕಾಗಿದೆ.
14.71 ಎಕರೆ ಪ್ರದೇಶದಲ್ಲಿರುವ ಈ ಕೆರೆಯ ನೀರನ್ನು ಕಲುಷಿತ ಮಾಡಿದವರಾರು ಎಂಬ ಚರ್ಚೆ ಸಾರ್ವಜನಿಕರಲ್ಲಿ ಜೋರಾಗಿದೆ. ಹೆಚ್ಚಿನವರು ಬೆರಳು ತೋರಿಸುತ್ತಿರುವುದು ಕೆರೆಗೆ ತಾಗಿಕೊಂಡೇ ಇರುವ ಖಾಸಗಿ ಕಾಲೇಜಿನತ್ತ. ಕಳೆದ ಆರು ತಿಂಗಳಿನಿಂದ ಕಾಲೇಜಿನ ತ್ಯಾಜ್ಯನೀರು ಕೆರೆಗೆ ಬಿಡಲಾಗುತ್ತಿತ್ತು.
ಈ ಬಗ್ಗೆ ಗ್ರಾ.ಪಂ.ಆಡಳಿತಕ್ಕೂ ಮನವರಿಕೆ ಮಾಡಿಕೊಡಲಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಅಲ್ಲದೆ ಕಾಲೇಜಿನ ಪ್ರಯೋಗಾಲಯದ ತ್ಯಾಜ್ಯ ಎಲ್ಲಿಗೆ ಹೋಗುತ್ತಿತ್ತು ಎಂಬ ಪ್ರಶ್ನೆಯೂ ಎದ್ದಿದೆ.
ಮೀನುಗಳ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದ್ದು ಪರಿಸರ ದುರ್ವಾಸನಾಯುಕ್ತವಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ.