ಬೆಳ್ತಂಗಡಿ; ಮತದಾನ ಮತ್ತು ಸಂವಿಧಾನ ಈ ಎರಡೂ ಅಂಬೇಡ್ಕರ್ ಅವರು ಕೊಟ್ಟಿರುವ ಕೊಡುಗೆ. ಆದರೂ ನಮ್ಮ ಮೇಲೆ ಇಂದು ದೌರ್ಜನ್ಯ ನಡೆಯುತ್ತಿದೆ ಎಂದರೆ ಅದು ನಾವು ಸಂವಿಧಾನದ ಬಗ್ಗೆ ಜಾಗೃತರಾಗದಿರುವುದೇ ಕಾರಣ. ಆ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ರಕ್ಷಣೆಗಾಗಿ ಹಿಂದುಳಿದ ಜಾತಿ ವರ್ಗಗಳು ದೊಡ್ಡ ಮಟ್ಟದಲ್ಲಿ ಒಂದಾಗಬೇಕಾದ ತುರ್ತು ಅಗತ್ಯತೆ ಇದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಮಠಾಧೀಶ, ಪ್ರಗತಿಪರ ಸ್ವಾಮೀಜಿಗಳ ರಾಜ್ಯ ಒಕ್ಕೂಟದ ಪ್ರ.ಕಾರ್ಯದರ್ಶಿ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.
ಕೊಯ್ಯೂರು ಆದೂರ್ಪೆರಾಲ್ ನಲ್ಲಿ ಭೀಮ್ ರಮಾ ಯುವ ವೇದಿಕೆ ವತಿಯಿಂದ ಮೇ.1 ರಂದು ನಡೆದ, ವಿಶ್ವ ಜ್ಞಾನದ ಸಂಕೇತ ಡಾ.ಬಿ.ಆರ್ ಅಂಬೇಡ್ಕರ್ ಅವರ 131 ನೆಯ ಜನ್ಮದಿನಾಚರಣೆ ಹಾಗೂ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಧ್ವನಿ ಸಂದೇಶ ನೀಡುತ್ತಾ ಮಾತನಾಡಿದರು.
ಭೀಮ್ ರಮಾ ಯುವ ವೇದಿಕೆ ಕೊಯ್ಯೂರು ಅಧ್ಯಕ್ಷ ಪ್ರತೀಶ್ ಬಿ ಅಧ್ಯಕ್ಷತೆ ವಹಿಸಿದ್ದರು. ಹಾಸನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ಸಹಾಯಕ ಅಭಿಯೋಜಕಿ ವಿನಯರಾಣಿ ಕಾರ್ಯಕ್ರಮ ಉದ್ಘಾಟಿಸಿದರು.
ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ ಮಾತನಾಡಿ, ಸಮಾಜದಲ್ಲಿ ಇಂದು ವಿಚಾರ, ಆಹಾರ, ಆಚಾಗಳ ಮೇಲೆ ಹಲ್ಲೆಯಾಗುತ್ತಿದೆ. ಸಂವಿಧಾನ ಮತ್ತು ಆಶಯ ನಾಶಕ್ಕೆ ಎಲ್ಲ ವ್ಯವಸ್ಥೆ ಕಟೀಬದ್ದವಾಗಿ ನಿಂತಿದೆ. ಹಿಂದುಳಿದ ಸಮಾಜ ಮೀಸಲಾತಿ ಮೂಲಕ ಮುಖ್ಯವಾಹಿನಿಗೆ ಬರಬೇಕಾಗಿದ್ದು, ಅದನ್ನು ಒಡೆದುಹಾಕುವ ಕೆಲಸ ನಡೆಯುತ್ತಿದೆ. ಸಂಸ್ಥೆಗಳನ್ನು ಖಾಸಾಗೀಕರಣಗೊಳಿಸಿ ಮೀಸಲಾತಿ ದುರ್ಬಲವಾಗುವಂತೆ ಮಾಡಲಾಗಿದೆ. ಆದುದರಿಂದ ಹಿಂದುಳಿದವರ ಒಗ್ಗಟ್ಟು ಅನಿವಾರ್ಯವಾಗಿದೆ ಎಂದರು.
ಹಿರಿಯ ಸಾಹಿತಿ, ಸಾಮಾಜಿಕ ಹೋರಾಟಗಾರ್ತಿ ಅತ್ರಾಡಿ ಅಮೃತಾ ಶೆಟ್ಟಿ ಮಾತನಾಡಿ, ಸಂವಿಧಾನದಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ, ಹೋರಾಟ ಇವುಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯ ಸಿಕ್ಕಿ 74 ವರ್ಷ ದಾಟಿದರೂ ಸ್ವಾತಂತ್ರ್ಯ ಸಮಾನತೆ ಸಹೋದರತೆ ಮರೀಚಿಕೆಯಾಗಿದೆ. ಸ್ವಲ್ಪ ಪ್ರಮಾಣದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ ಸಮಾನತೆ ಬಂದಿದ್ದರೂ ಸಾಮಾಜಿಕವಾದ ಅಸ್ಪೃಶ್ಯತೆ ಇಂದಿಗೂ ಮುಂದುವರಿದೆ. ಅದಕ್ಕಾಗಿ ಶಿಕ್ಷಣ ಜಾಗೃತಿಯೊಂದಿಗೆ ಸಮಾನತೆ ಸಾಧಿಸೋಣ ಎಂದರು.
ವಿಮುಕ್ತಿ ಸಂಸ್ಥೆ ದಯಾಳ್ ಬಾಗ್ ನಿರ್ದೇಶಕ ವಂದನೀಯ ಫಾ|ವಿನೋದ್ ಮಸ್ಕರೇನ್ಹಸ್, ಮನ್ಸ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ವೆಂಕಣ್ಣ ಕೊಯ್ಯೂರು ಶುಭಕೋರಿದರು.
ವೇದಿಕೆಯಲ್ಲಿ ಕೊಯ್ಯೂರು ಗ್ರಾ. ಪಂ. ಸದಸ್ಯರಾದ ಲೆತೀಫ್, ಲೋಕೇಶ್, ಹೇಮಾವತಿ, ಶಾರದಾ ಹೇಮಲ್ಕೆ, ಡಿಎಸ್ಎಸ್ ತಾ.ಸಂಚಾಲಕ ನೇಮಿರಾಜ್ ಕಿಲ್ಲೂರು, ಜಿ.ಪಂ ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಮಾಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಬೇಬಿ ಸುವರ್ಣ ಉಪಸ್ಥಿತರಿದ್ದರು.
ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ನಿತೀಶ್ ಕೆ.ವಿ ಸಂವಿಧಾನದ ಪೀಠಿಕೆ ಓದಿದರು. ಗೋವಿಂದ ವಂದಿಸಿದರು. ಶೇಖರ ಸ್ವಾಗತಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತ ಇಂಡಿಯನ್ ಫಸ್ಟ್ ಡ್ಯಾನ್ಸರ್ ಮಂಗಳೂರು ಇವರಿಂದ ನೃತ್ಯ ವೈಭವ, ಪರಿವರ್ತನಾಗೀತೆ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಲಾಸಂಜೆ ಕಾರ್ಯಕ್ರಮ ನಡೆಯಿತು. ರಕ್ಷಿತ್ ಶಿವರಾಮ್ ಪ್ರಾಯೋಜಕತ್ವದಲ್ಲಿ ಸಾಮಾಜಿಕ ಚಿಂತನೆ, ಮತ್ತು ನ್ಯಾಯ ಹಾಗೂ ಕಾನೂನಿನ ಮಹತ್ವ ಸಾರುವ ಜೈ ಭೀಮ್ ಕನ್ನಡ ಚಲನಚಿತ್ರ ಪ್ರದರ್ಶಿಸಲಾಯಿತು. ಸಮಾರಂಭಕ್ಕೂ ಮುನ್ನ ಮೆರವಣಿಗೆ ನಡೆಯಿತು.