ಬೆಳ್ತಂಗಡಿ : ಕಾರ್ಮಿಕರು ಹಾಗೂ ಕಾರ್ಖಾನೆಗಳು ಒಂದೇ ನಾಣ್ಯದ ಎರಡು ಮುಖಗಳು, ಕಾರ್ಮಿಕರ ಸಮಸ್ಯೆಗಳನ್ನು ಕಡೆಗಣಿಸುವುದು ಅಕ್ಷಮ್ಯ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಅವರು ಶನಿವಾರ ಉಜಿರೆಯ ಕೃಷ್ಣಾನುಗ್ರಹದಲ್ಲಿ ಆಶಾ ಕಾರ್ಯಕರ್ತೆಯರಿಗೆ ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಮೊಬೈಲ್ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವತ ಚಾಲಕನಾಗಿ ದುಡಿದಿದ್ದು ಚಾಲಕರ ಹಾಗೂ ಕಾರ್ಮಿಕರ ಕಷ್ಟಗಳನ್ನು ಅರಿತಿದ್ದೇನೆ. ಇವರ ಬದುಕನ್ನು ಗುರುತಿಸುವ ನಿಟ್ಟಿನಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಯೋಜನೆ ಜಾರಿಗೊಳ್ಳಲಿದೆ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರ ಮೇಲೆ ಶೋಷಣೆ ನಡೆಯುತ್ತಿರುವ ಬಗ್ಗೆ ತಿಳಿದುಬಂದಿದೆ. ಹೀಗಾಗಿ ಇವರ ಶ್ರೇಯೋಭಿವೃದ್ಧಿಗೆ ಹೊಸ ಕಾನೂನು ರೂಪುಗೊಳ್ಳಲಿದೆ. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಅರಣ್ಯ ಇಲಾಖೆ ಸಚಿವ ಸ್ಥಾನ ಸಿಕ್ಕಿದ್ದರೂ, ಕಾರ್ಮಿಕರ ಅಭಿವೃದ್ಧಿಯನ್ನು ಪರಿಗಣಿಸಿ ಕಾರ್ಮಿಕ ಖಾತೆಯನ್ನು ಕೇಳಿ ಪಡೆದಿದ್ದೇನೆ,ನೂತನ ಮುಖ್ಯಮಂತ್ರಿಗಳ ಬಳಿಯು ಇದೇ ಖಾತೆಯನ್ನು ನಿರ್ವಹಿಸುವ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದರು.
ಕೋವಿಡ್ ಅಲೆಗಳ ನಡುವೆ ಸಂಕಷ್ಟದ ಸರಮಾಲೆಗಳೊಂದಿಗೆ ತಮ್ಮ ಕುಟುಂಬದ ಭವಿಷ್ಯ ಬದಿಗಿಟ್ಟು ಸಮರ್ಪಣಾ ಮನೋಭಾವದಿಂದ ಕೆಲಸ ನಿರ್ವಹಿಸಿದ ಆಶಾ ಕಾರ್ಯಕರ್ತೆಯರು ಪ್ರಾತಃಸ್ಮರಣೀಯರು. ಸಮಾಜದ ಸ್ವಾಸ್ಥ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿ ಮಾರಕ ರೋಗಗಳ ಕಾಲದಲ್ಲಿ ಇವರು ನೀಡಿರುವ ಸೇವೆ ಅಮೋಘವಾದುದು ಎಂದು ವಿಶ್ಲೇಷಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಆಶಾ ಕಾರ್ಯಕರ್ತೆಯ ಮಕ್ಕಳ ಶಿಕ್ಷಣಕ್ಕೆ ಹಾಗೂ ಅವರಿಗೆ ಹೆಚ್ಚಿನ ಅನುಕೂಲ ನೀಡುವ ದೃಷ್ಟಿಯಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ 250 ಮೊಬೈಲ್ ಗಳನ್ನು ನೀಡಲಾಗಿದೆ.
ಈಗಾಗಲೇ ತಾಲೂಕಿನಲ್ಲಿ 8500 ಕಾರ್ಮಿಕರಿಗೆ ರೂ. 3000 ಮೌಲ್ಯದ ಆಹಾರ ಕಿಟ್ ಗಳನ್ನು ವಿತರಿಸಲಾಗಿದೆ. ಎಂ ಎಲ್ ಸಿ ಹಾಗೂ ಸಂಸದರ ಮೂಲಕ ಇನ್ನೂ ಸುಮಾರು 5000 ಕಿಟ್ ಗಳು ಮುಂದಿನ ದಿನಗಳಲ್ಲಿ ವಿತರಣೆಗೊಳ್ಳಲಿವೆ ಎಂದು ಹೇಳಿದರು.
ಎಂ ಎಲ್ ಸಿ ಪ್ರತಾಪಸಿಂಹ ನಾಯಕ್ ಶುಭಹಾರೈಸಿದರು. ಸಚಿವರ ಪತ್ನಿ ವನಜಾಕ್ಷಿ ಹೆಬ್ಬಾರ್, ಬೆಳ್ತಂಗಡಿ ಭಾಜಪ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಹಾಗೂ ಗಣೇಶ ಗೌಡ, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ,ಉಪಾಧ್ಯಕ್ಷ ರವಿಕುಮಾರ್ ಬರೆಮೇಲು ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು,ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಹರಿಣಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಮತ್ತಿತರರು ಉಪಸ್ಥಿತರಿದ್ದರು.