ಮಂಗಳೂರು: ಕಲ್ಲಿದ್ದಲು ಕೊರತೆ ಕಾರಣಕ್ಕಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿತ ಮಾಡಿಲ್ಲ. ಉಳಿದ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ವಿದ್ಯುತ್ ದರ ನಿರ್ವಹಣೆಯನ್ನು ನಾವು ಅತ್ಯಂತ ಯಶಸ್ವಿಯಾಗಿ ಮಾಡಿದ್ದೇವೆ ಎಂದು ಇಂಧನ ಸಚಿವ ವಿ. ಸುನೀಲ್ಕುಮಾರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಕ್ಕೆ ಸಾಕಷ್ಟು ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ರಾಜ್ಯದ ಬೇಡಿಕೆ ಎಷ್ಟು ಇದೆಯೋ ಅಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಊಹಾಪೋಹಗಳನ್ನು ಕೆಲ ಮಾಧ್ಯಮಗಳು ಹಾಗೂ ಪ್ರತಿಪಕ್ಷಗಳು ಸುದ್ದಿ ಮಾಡುತ್ತಿದ್ದಾರೆ. ಇದು ತಪ್ಪು ಮಾಹಿತಿಯಾಗಿದೆ.
ನಮ್ಮಲ್ಲಿ 14 ಸಾವಿರ ಮೆಗಾವ್ಯಾಟ್ ವಿದ್ಯುತ್ನ ಬೇಡಿಕೆ ಇದೆ. ಈಗ ಬೇಸಿಗೆಗೆ ಬೇಕಾದಷ್ಟು ವಿದ್ಯುತ್ ಸರಬರಾಜು ಆಗುತ್ತಿದೆ. ವಿದ್ಯುತ್ನ ಬೇಡಿಕೆ ಉತ್ಪಾದನೆಗಿಂತ ಕಡಿಮೆಯಾದರೆ ಉಳಿದ ರಾಜ್ಯಕ್ಕೆ ಮಾರಾಟ ಮಾಡುವಷ್ಟು ಸಾಮರ್ಥ್ಯ ಹೊಂದಿದ್ದೇವೆ. ಕಲ್ಲಿದ್ದಲು ಕೊರತೆ ಆಗದಂತೆ ಕೇಂದ್ರ ಸರಕಾರದ ಜತೆ ಸಂಪರ್ಕದಲ್ಲಿ ಇದ್ದೇವೆ ಎಂದರು.
ಪಿಎಂ ಕುಸುಮ್ ಯೋಜನೆಯಡಿ ಕೃಷಿ ಪಂಪ್ಸೆಟ್ಗಳಿಗೆ ಸೋಲಾರ್ ವಿದ್ಯುತ್ ಒದಗಿಸಲಾಗುವುದು. ರಾಜ್ಯದಲ್ಲಿ ಎರಡೂವರೆ ಲಕ್ಷ ರೈತರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. 960 ಮೆಗಾವ್ಯಾಟ್ ವಿದ್ಯುತ್ನ್ನು ಸೋಲಾರ್ ಪ್ಲ್ಯಾಂಟ್ ಮೂಲಕ ಉತ್ಪಾದಿಸಲು ಸರ್ವೆ ಕಾರ್ಯ ಪೂರ್ಣಗೊಂಡಿದೆ ಎಂದರು.