ಬೆಳ್ತಂಗಡಿ : ಸಾಮಾಜಿಕ ವ್ಯವಸ್ಥೆಗಳು ಬುಡಮೇಲಾದಾಗ ಪ್ರಕೃತಿಯೇ ಸೃಷ್ಟಿಯ ಮೂಲಕ ರಕ್ಷಣೆ ನೀಡುತ್ತದೆ.ಇಂತಹ ಸಂದರ್ಭದಲ್ಲಿ ಜನರನ್ನು ಶಾಂತಿ ಮೂಲಕ ಒಗ್ಗೂಡಿಸಿ ತತ್ವ ವಿಚಾರಗಳ ಮೂಲಕ ಬೆಳಕು ಚೆಲ್ಲಬೇಕು. ಲೋಕದಲ್ಲಿ ಕೆಲವೊಂದು ಅನಿಷ್ಟ ಪದ್ಧತಿಗಳು ತಾಂಡವವಾಡುತ್ತಿದ್ದಾಗ ಶ್ರೀ ನಾರಾಯಣ ಗುರುಗಳು ಜನಿಸಿ ಬಂದು ಜಾತಿ ವೈಷಮ್ಯ ಎಂಬ ಅಜ್ಞಾನವನ್ನು ತೊಡೆದು ಹಾಕಿ, ಲೋಪವಿರದ ಜನಪರ ಕಾಳಜಿಯಿಂದ ಲೋಕ ಜಯಿಸಲು ಸಾಧ್ಯ ಎಂಬುವುದನ್ನು ನಿರೂಪಿಸಿದರು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಕನ್ಯಾಡಿ ಮಹಾಸಂಸ್ಥಾನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನಾಚರಣೆಯ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ನಾರಾಯಣಗುರುಗಳು ಅಸ್ಪೃಶ್ಯತೆ ಎಂಬ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಶಾಂತಿ ಆದರ್ಶ ಸಂಸ್ಕೃತಿಗಳ ಮೂಲಕ ಸಮಾಜದಲ್ಲಿ ಸುಧಾರಣೆಗಳನ್ನು ತಂದರು. ಯಾವುದೇ ಕ್ರಾಂತಿಗಳನ್ನು ಮಾಡದೆ ಚಿಂತನೆಗಳ ಮೂಲಕ ಪರಿವರ್ತನೆ ಹಾದಿಯನ್ನು ತಂದು ಸಮಾಜದ ತೊಡಕುಗಳನ್ನು ನಿವಾರಿಸಿದರು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ ಜಗತ್ತಿನಲ್ಲಿ ಶಾಂತಿ ನೆಲೆಸಲು ನಾರಾಯಣಗುರುಗಳ ಚಿಂತನೆಗಳು ಪ್ರೇರಣೆಯಾಗಿವೆ.ದೇಗುಲ ವಿದ್ಯಾ ಮಂದಿರ ಗಳನ್ನು ಕಟ್ಟಿ ಅಜ್ಞಾನವನ್ನು ಹೋಗಲಾಡಿಸಿದ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಬಾಲ್ಯದಿಂದಲೇ ನಮ್ಮ ಸಂಸ್ಕೃತಿ ಧರ್ಮವನ್ನು ರಕ್ಷಿಸಿ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ತಹಸಿಲ್ದಾರ್ ಜೆ. ಮಹೇಶ್ ನಗರ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್,ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು,ಬಿಇಒ ವಿರೂಪಾಕ್ಷಪ್ಪ, ವೃತ್ತನಿರೀಕ್ಷಕ ಶಿವಕುಮಾರ್, ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ಚಂದ್ರಶೇಖರ್,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್, ನಗರ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಹಾಗೂ ಮತ್ತಿತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಸಾದ್ ಅಜಿಲ ಸ್ವಾಗತಿಸಿದರು. ತಾಪಂ ಇಒ ಕುಸುಮಾಧರ ವಂದಿಸಿದರು. ತಾಪಂ ಸಂಯೋಜಕ ಜಯಾನಂದ ಲಾಯ್ಲ ಕಾರ್ಯಕ್ರಮ ನಿರೂಪಿಸಿದರು.