ಬೆಳ್ತಂಗಡಿ: ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಜಂಕ್ಷನ್ನಲ್ಲಿದ್ದ ಭಗವದ್ವಜ ಹಾಗೂ ಅದರ ಕಂಬವನ್ನು ಕಿಡಿಗೇಡಿಗಳು ಹಾಳುಗೆಡವಿ ನೆಲಕ್ಕುರುಳಿಸಿದ ಘಟನೆ ಎ. 17ರ ರಾತ್ರಿ ಸಂಭವಿಸಿತ್ತು. ಆದರೆ ಮತ್ತೆ ಅದನ್ನು ಸ್ಥಾಪಿಸಲಾಗಿದೆ.
ಕೊಕ್ಕಡದಿಂದ ಪಟ್ರಮೆಗೆ ತೆರಳುವ ಮಾರ್ಗದಲ್ಲಿರುವ ಉಪ್ಪಾರಪಳಿಕೆ ಎಂಬಲ್ಲಿ ಸ್ಥಳೀಯ ಹಿಂದೂ ಯುವಕರು ಸೇರಿಕೊಂಡು ಭಗವದ್ವಜವನ್ನು ಸ್ಥಾಪಿಸಿದ್ದರು.
ಆದರೆ ಭಾನುವಾರ ರಾತ್ರಿ ಈ ಭಗವದ್ವಜ ಹಾಗೂ ಅದರ ಕಂಬ ಬುಡ ಸಮೇತ ಮುರಿದು ರಸ್ತೆಗೆ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಇದೊಂದು ಉದ್ದೇಶಪೂರಿತ ಹಾನಿಯೆಂದು ಪರಿಗಣಿಸಿದ್ದಾರೆ.
ಇದೇ ಸಂದರ್ಭ ಏಪ್ರಿಲ್ 17ರಂದು ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳದ ಸಂಕ್ರಾಂತಿ ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ ಘಟಕದ ವತಿಯಿಂದ ಅಂತರ್ ರಾಜ್ಯ ಮಟ್ಟದ ಬೃಹತ್ ಹೊನಲು ಬೆಳಕಿನ ಹಗ್ಗ ಜಗ್ಗಾಟ ನಡೆಯುತ್ತಿತ್ತು.
ಈ ಪಂದ್ಯಾಟದ ಸಭಾಕಾರ್ಯಕ್ರಮಕ್ಕೆ ಆಗಮಿಸಿದ ಬೆಳ್ತಂಗಡಿ ಶಾಸಕರಿಗೆ ಉಪ್ಪಾರ ಪಳಿಕೆಯಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸಲಾಗಿತ್ತು. ವಿಷಯ ತಿಳಿದ ಶಾಸಕರು ವೇದಿಕೆಯಲ್ಲಿಯೇ ಈ ಬಗ್ಗೆ ವಿಷಯ ಪ್ರಸ್ತಾಪಿಸಿ, ನೇರವಾಗಿ ಸೆಣೆಸಾಡಲು ಸಾಧ್ಯವಾಗದವನು ಮಾತ್ರ ಈ ರೀತಿಯ ದುಷ್ಕೃತ್ಯಕ್ಕೆ ಮನಸು ಮಾಡುತ್ತಾನೆ. ಧ್ವಜವು ಹಿಂದುಗಳ ಶಕ್ತಿ ಮತ್ತು ಪ್ರೇರಣೆಯ
ಸಂಕೇತ ಮಾತ್ರವಲ್ಲದೆ ನಮ್ಮ ಹೃದಯದಲ್ಲಿ ಅದಕ್ಕೆಆರಾಧನೆಯ ಸ್ಥಾನವನ್ನು ನೀಡಿದೆ.
ಹಾಗಾಗಿ ಮತ್ತದೇ ಹಾಳುಗೆಡಹಿದ ಜಾಗದಲ್ಲಿ ಮುರಿಯಲು ಸಾಧ್ಯವಾಗದ ಬಲಿಷ್ಠವಾದ ಹಿಂದೂ ಧ್ವಜವನ್ನು ಹಾರಾಡುವಂತೆ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಅಲ್ಲದೆ ಇನ್ನು ಮುಂದೆ ಇಂತಹ ದುಷ್ಕೃತ್ಯ ಮರುಕಳಿಸಿದರೆ ಪರಿಣಾಮ ಬೇರೆ ರೀತಿಯೇ ಆಗಿರುತ್ತದೆ ಎಂದು ದುಷ್ಕರ್ಮಿಗಳಿಗೆ ಈ ಸಂದರ್ಭ ಎಚ್ಚರಿಕೆ ನೀಡಿದರು.
ಘಟನೆ ನಡೆದ 24ಗಂಟೆಯೊಳಗೆ ಮತ್ತದೇ ಜಾಗದಲ್ಲಿ ಹಾರಾಡಿದ ಭಗವದ್ವಜ
ಏಪ್ರಿಲ್ ೧೭ರ ತಡರಾತ್ರಿ ನಡೆದ ದುಷ್ಕೃತ್ಯದ ಮರುದಿನ ಅಂದರೆ ಏಪ್ರಿಲ್ 1೮ರಂದು ಸಂಜೆ 7 ಗಂಟೆಯ ಒಳಗೆ ಉಪ್ಪಾರಪಳಿಕೆ ಹಾಗೂ ಕೊಕ್ಕಡ ಹಿಂದೂ ಕಾರ್ಯಕರ್ತರು ಸೇರಿ ಅದೇ ಜಾಗದಲ್ಲಿ ಸಿಮೆಂಟ್ ಮತ್ತು ಸರಳುಗಳಿಂದ ಕುಡಿದ ಬಲಿಷ್ಠವಾದ ಕಟ್ಟೆಯನ್ನು ನಿರ್ಮಿಸಿ ಬೃಹದಾದ ಭಗವದ್ವಜ ವನ್ನು ಸ್ಥಾಪಿಸಿ ಹಾರಾಡುವಂತೆ ಮಾಡಿದ್ದಾರೆ.
ಕಿಡಿಗೇಡಿಗಳ ಪತ್ತೆಗೆ ಆಗ್ರಹ ಪ್ರಕರಣ ದಾಖಲು
ಏಪ್ರಿಲ್ 17 ತಡರಾತ್ರಿ ಸಂಭವಿಸಿದ ದುಷ್ಕೃತ್ಯವನ್ನು ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ತಾಲೂಕು ಮಟ್ಟದ ಕಾರ್ಯಕರ್ತರು ಖಂಡಿಸಿದ್ದು, ಕಿಡಿಗೇಡಿಗಳನ್ನು ಕೂಡಲೇ ಪತ್ತೆಮಾಡಿ ಬಂಧಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದೆ.