News Karnataka Kannada
Monday, April 29 2024
ಮಂಗಳೂರು

ಉಜಿರೆಯ ವಾಸುದೇವ ಆಚಾರ್ಯಗೆ ಶೇಣಿ ಪ್ರಶಸ್ತಿ ಪ್ರದಾನ

Bltng
Photo Credit :

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದಲ್ಲಿ ಎರಡು ಶತಮಾನಗಳಿಂದ ಯಕ್ಷಗಾನ ಕಲೆಯನ್ನು ನಾಡಿನಾದ್ಯಂತ ಪಸರಿಸುವ ಮೂಲಕ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮೇಳದ ಯಜಮಾನನಾಗಿ ನಾನು ಅನೇಕ ಪ್ರತಿಭಾನ್ವಿತ ಕಲಾವಿದರನ್ನು ಕಂಡಿದ್ದೇನೆ. ಹಾಗಾಗಿ ಯಕ್ಷಗಾನ ಮತ್ತು ಹರಿಕಥೆ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಿಡಿ ರೂಪದಲ್ಲಿ ದಾಖಲೀಕರಣಗೊಳಿಸಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಬಣ್ಣಿಸಿದರು.

ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಉಜಿರೆ ಘಟಕ, ಶ್ರೀ ಜನಾರ್ದನ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ, ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಉಜಿರೆಯ ಯಕ್ಷಜನ ಸಭಾ ಸಹಯೋಗದಿಂದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಮೇ 29 ರಂದು ಜರಗಿದ ಶೇಣಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಶೇಣಿಯವರು ಯಕ್ಷಗಾನ ಮತ್ತು ಹರಿಕಥೆಯ ಮೇರು ಕಲಾವಿದರು. ಧರ್ಮಸ್ಥಳದ ಯಕ್ಷಗಾನ ಮೇಳದಲ್ಲಿ ಹಿರಿಯ ಕಲಾವಿದರೊಂದಿಗೆ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ಶೇಣಿ ಒಂದು ಸಂಸ್ಥೆಯಾಗಿ ಯಕ್ಷಗಾನ ಮತ್ತು ತಾಳಮದ್ದಳೆಯನ್ನು ಉತ್ತುಂಗಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಆರ್.ವಾಸುದೇವ ಮಾತನಾಡಿ, ಉಜಿರೆಯು ಸಾಂಸ್ಕೃತಿಕ ನಗರಿಯಾಗಿ ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿರುವ ನಿಧಿಯಾಗಿದೆ. ಹಿಂದೆ ದೇವಸ್ಥಾನಗಳು ಹರಿಕಥೆಗಳಿಗೆ ರಾಜಾಶ್ರಯ ನೀಡುತ್ತಿದ್ದರಿಂದ ಆರು ಸಾವಿರ ವರ್ಷ ಹಿಂದಿನ ಪುರಾಣಗಳು ಇಂದಿಗೂ ಜನಜನಿತವಾಗಿದೆ. ಹೀಗಾಗಿ ಹರಿಕಥೆ ಮತ್ತು ಗಮಕ ಕಲೆ ಮನೆ ಮನೆಗಳಿಗೆ ತಲುಪಿಸಲು ದೇವಸ್ಥಾನಗಳು ಆಶ್ರಯತಾಣವಾಗಬೇಕು ಎಂದು ಕರೆ ನೀಡಿದರು‌.

ನ್ಯಾಯವಾದಿ ಬಿ.ಕೆ.ಧನಂಜಯ ರಾವ್ ಉಪಸ್ಥಿತರಿದ್ದರು. ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಜಿ.ಕೆ.ಭಟ್ ಸೇರಾಜೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪಿ.ವಿ.ರಾವ್ ವಂದಿಸಿದರು.

ಮಧ್ಯಾಹ್ನ ಎ.ಆರ್.ವಾಸುದೇವ ಅವರಿಂದ ಭಗವದ್ಗೀತೆ ಬಗೆಗೆ ಧಾರ್ಮಿಕ ಉಪನ್ಯಾಸ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದರಿಂದ ಶ್ರೀರಾಮದರ್ಶನ ತಾಳಮದ್ದಳೆ ಮತ್ತು ಸಂಜೆ ಶ್ರೀ ರಾಮ ನಿರ್ಯಾಣ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.

ಯಕ್ಷಗಾನದ ಹಿಮ್ಮೇಳ ಮತ್ತು ಸಂಗೀತಗಾರರಾಗಿ ಸುಮಾರು 57 ವರ್ಷಗಳಿಂದ ಕಲಾಸೇವೆ ಗೈದ ಉಜಿರೆಯ ವಾಸುದೇವ ಆಚಾರ್ಯ ದಂಪತಿಯನ್ನು ಶೇಣಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ನಿವೃತ್ತ ಪ್ರಾಂಶುಪಾಲ ಗೇರುಕಟ್ಟೆ ದಿವಾಕರ ಆಚಾರ್ಯ ಅಭಿನಂದನಾ ಭಾಷಣ ಮಾಡಿದರು. ಶೇಣಿ ಚಾರಿಟಬಲ್ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಸರ್ಪಂಗಳ ಈಶ್ವರ ಭಟ್ ಸಮ್ಮಾನ ಪತ್ರ ವಾಚಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು