ಬೆಳ್ತಂಗಡಿ: ತಾಲೂಕಿನ ಗ್ರಾಮ ಪಂಚಾಯತ್ ನಿಂದ ತೊಡಗಿ ಸಮಗ್ರ ನವ ಬೆಳ್ತಂಗಡಿ ತಾಲೂಕು ನಿರ್ಮಾಣಕ್ಕೆ ತಾಲೂಕಿನ ಎಲ್ಲ ಇಂಜಿನಿಯರ್ ಗಳ ಸಲಹೆ ,ಸೂಚನೆ ,ಮಾರ್ಗದರ್ಶನ ಅಗತ್ಯ ಬೇಕು. ಗುಣಮಟ್ಟದ ಕಾಮಗಾರಿಯೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ನವ ಬೆಳ್ತಂಗಡಿ ನಿರ್ಮಾಣದಲ್ಲಿ ಸಂಘದ ಪೂರ್ಣ ನೆರವು ಹಾಗು ಸಹಕಾರವಿರಲಿ ಎಂದು ಶಾಸಕ ಹರೀಶ್ ಪೂಂಜ ಆಶಿಸಿದರು.
ಅವರು ಎ27 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್(ಇಂಡಿಯಾ)ನ ಬೆಳ್ತಂಗಡಿ ಕೇಂದ್ರದ ಉದ್ಘಾಟನೆ ಹಾಗು ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ತಾಲೂಕಿನ ಪ್ರಮುಖ ರಸ್ತೆಗಳ ಅಗಲೀಕರಣ ,ನೀರಾವರಿ ಕಿಂಡಿ ಆಣೆಕಟ್ಟು ಮೂಲಕ ಅಂತರ್ಜಲ ಸಂರಕ್ಷಣೆ ,ಎಲ್ಲ ವೆಂಟೆಡ್ ಡ್ಯಾಮ್ ಗಳಲ್ಲಿ ಸಂಪರ್ಕ ಸೇತುವೆ ನಿರ್ಮಿಸಲಾಗಿದೆ. ಗುರುವಾಯನಕೆರೆಯಿಂದ ಚಾರ್ಮಾಡಿವರೆಗಿನ ರೂ. 718 ಕೋಟಿ ವೆಚ್ಚದ ಚತುಷ್ಪಥ ರಸ್ತೆಯ ಬದಲು ಪಣಕಜೆ ಯಿಂದ ನಿಡಿಗಲ್ ವರೆಗೆ ದ್ವಿಪಥ ರಸ್ತೆ ಕಾಮಗಾರಿ ಮುಂದಿನ ನವೆಂಬರ್ ನಿಂದ ಕಾರ್ಯಾರಂಭಗೊಳ್ಳಲಿದೆ ಎಂದು ನುಡಿದರು.
ಸಮಾರಂಭವನ್ನು ದೀಪ ಬೆಳಗಿ ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ತೂಗು ಸೇತುವೆಗಳ ಸರದಾರ ಖ್ಯಾತಿಯ ಗಿರೀಶ್ ಭಾರದ್ವಾಜ್ ಅವರು ದೇವರು ಜೀವನದಲ್ಲಿ ಅವಕಾಶಗಳನ್ನು ಕೊಡುತ್ತಾನೆ . ಅದನ್ನು ಪ್ರಾಮಾಣಿಕ ಸೇವೆ ,ಕರ್ತವ್ಯ ನಿಷ್ಠೆ, ಶಿಸ್ತು ,ಸಮಯಪಾಲನೆ ,ನಗುಮುಖದ ಸಮಾಜ ಸೇವೆ ,ದಕ್ಷತೆ ,ಮಾನವೀಯತೆ ,ನಿಷ್ಪಕ್ಷಪಾತ ಕಾರ್ಯವೈಖರಿ ಯಿಂದ ದೇವರು ಮೆಚ್ಚುವ ರೀತಿ ಯಲ್ಲಿ ನಿರ್ವಹಿಸಿ ,ತಪ್ಪಾಗಿದ್ದಲ್ಲಿ ಒಪ್ಪಿಕೊಳ್ಳುವ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ನುಡಿದು ನೂತನ ಸಂಘಟನೆಗೆ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಗಿರೀಶ್ ಭಾರದ್ವಾಜ್ ಮತ್ತು ಪ್ರಶಾಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ರಾಷ್ಟ್ರಾಧ್ಯಕ್ಷ ವಿಜಯ ಕೆ.ಸನಪ್ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಶುಭ ಕೋರಿದರು. ಸಂಸ್ಥೆಯ ದಕ್ಷಿಣ ಭಾಗದ ಉಪಾಧ್ಯಕ್ಷ ಕಚಾರಲಾ ರಾಜ್ಕುಮಾರ್ ಸಿವಿಲ್ ಇಂಜಿನಿಯರ್ ಗಳಿಗೆ ಭವ್ಯ ರಾಷ್ಟ್ರ ನಿರ್ಮಾಣದ ಅಪೂರ್ವ ಅವಕಾಶವಿದೆ ಎಂದರು.
ಬೆಳ್ತಂಗಡಿ ಕೇಂದ್ರದ ಛೇರ್ಮನ್ ಆಗಿ ಅಧಿಕಾರ ವ ಹಿಸಿಕೊಂಡ ಜಗದೀಶ್ ಪ್ರಸಾದ್ ಅವರು ಅಧಿಕಾರ ಸ್ವೀಕರಿಸಿ ಮಾತನಾಡುತ್ತ ಸಮಸ್ಯೆಗಳು ಹಲವಿವೆ. ಅವುಗಳನ್ನು ಎಲ್ಲರೊಂದಿಗೆ ಕೈಜೋಡಿಸಿ ಪರಿಹರಿಸಿಕೊಳ್ಳಬೇಕಾಗಿದೆ. ಮುಂದಿನ ಯುವ ಪೀಳಿಗೆ ಎಲ್ಲ ವಿಚಾರಗಳಲ್ಲಿ ಮಾಹಿತಿ,ತಂತ್ರಜ್ಞಾನ ಪಡೆಯುವಲ್ಲಿ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಜನರಿಗೆ ಉತ್ತಮ ಸೇವೆ ತಲುಪಿಸಬೇಕಾಗಿದೆ. ಯಾವುದೇ ಕುಂದುಕೊರತೆ ಬಾರದಂತೆ ಜಾಗ್ರತೆ ವಹಿಸಿ ದಕ್ಷತೆಯ ಕೆಲಸ ತಾಲೂಕಿನಲ್ಲಿ ಆಗುವಂತೆ ಹಾಗೂ ಶಾಸಕರ ಕನಸಿನಂತೆ 5-10 ವರ್ಷಗಳಲ್ಲಿ ತಾಲೂಕು ಬದಲಾವಣೆ ಕಾಣುವಂತಾಗಲು ಮಾಡುವ ಕೆಲಸ ಅಚ್ಚುಕಟ್ಟು,ಪ್ರಾಮಾಣಿಕತೆಯಿಂದ ನಿರ್ವಹಿಸಲು ದೇವರು ಶಕ್ತಿ ನೀಡಲಿ ಎಂದು ನುಡಿದರು.
ವೇದಿಕೆಯಲ್ಲಿ ಮಂಗಳೂರು ಕೇಂದ್ರದ ಕೋಶಾಧಿಕಾರಿ ದೇವೇಂದ್ರ ಶೆಟ್ಟಿ, ,ಬೆಳ್ತಂಗಡಿ ಕೇಂದ್ರದ ಕೋಶಾಧಿಕಾರಿ ಸುರೇಶ ಬಂಗೇರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ ಸಂಘಟನೆಯ ಬಗೆಗೆ ಪ್ರಸ್ತಾವಿಸಿ,ಮಾಹಿತಿ ನೀಡಿದರು. ಮಂಗಳೂರು ಕೇಂದ್ರದ ಛೇರ್ಮನ್ ಸತ್ಯರಂಜನ ರಾವ್ ಸ್ವಾಗತಿಸಿ ,ಬೆಳ್ತಂಗಡಿ ಕೇಂದ್ರದ ಕಾರ್ಯದರ್ಶಿ ವಿದ್ಯಾಕುಮಾರ್ ಕೆ .ವಂದಿಸಿದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಕೇಂದ್ರದ 65 ಸದಸ್ಯರ ಪ್ರಮಾಣ ಪತ್ರವನ್ನು ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.