ಮಂಗಳೂರು : ಆನ್ಲೈನ್ ಮೂಲಕ 5 ನಿಮಿಷದಲ್ಲಿ ನಿಮ್ಮ ಖಾತೆಗೆ ಸಾಲ ಎಂದು ಆಮಿಷವೊಡ್ಡುವ ನೂರಾರು ಆ್ಯಪ್ಗಳು ದಿನೇ ದಿನೇ ಯುವ ಸಮಾಜದ ಪಾಲಿಗೆ ಉರುಳಾಗುತ್ತಿದೆ. ಈ ಜಾಲಕ್ಕೆ ಬಿದ್ದ ಅದೆಷ್ಟೋ ಮಂದಿ ಅದರಿಂದ ಹೊರಬರಲಾಗದೆ ಚಡಪಡಿಸುತ್ತಿದ್ದು, ಮರ್ಯಾದೆಗೆ ಅಂಜಿ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ.
ಆನ್ಲೈನ್ ಸಾಲದ ಕೂಪಕ್ಕೆ ಡಿಸೆಂಬರ್ 31ರಂದು ಉಡುಪಿ ಕುಂದಾಪುರದ ಹೆಮ್ಮಾಡಿಯಲ್ಲಿ ವಿಘ್ನೇಶ್ ಎಂಬ ಯುವಕ ಬಲಿಯಾದರೆ, ಜನವರಿ 10 ರಂದು ಪಕ್ಷಿಕೆರೆ ಕಿನ್ನಿಗೋಳಿಯ ಸುಶಾಂತ್ ಎಂಬಾತ ಶರಣಾಗಿದ್ದಾನೆ. ಇಬ್ಬರೂ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಆನ್ಲೈನ್ ಸಾಲದಿಂದ ಹೊರಬರಲಾಗದೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಈ ಮೂಲಕ 11 ದಿನದ ಅಂತರದಲ್ಲಿ ಇಬ್ಬರು ಈ ಜಾಲಕ್ಕೆ ಸಿಲುಕಿ ಮೃತಪಟ್ಟಂತಾಗಿದೆ.
ಗೂಗಲ್ನಲ್ಲಿ ಆನ್ಲೈನ್ ಲೋನ್ ಎಂದು ತಡಕಾಡಿದ ಕೂಡಲೇ ನೂರಾರು ಆ್ಯಪ್ಗಳು ಸಾಲದ ವಿವರ ನೀಡುತ್ತವೆ. ಆ ಆ್ಯಪ್ಗಳನ್ನು ಡೌನ್ಲೋಡ್ ಮಾಡಿ ಅವರು ಕೇಳುವ ಸಾಲಗಾರನ ದಾಖಲೆಗಳನ್ನು ಸಲ್ಲಿಸಿದ ಕೆಲವೇ ಕ್ಷಣದಲ್ಲಿ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಆದರೆ ಈ ಆನ್ಲೈನ್ ಲೋನ್ಗಳೇ ದಿನ ಕಳೆದಂತೆ ಕಂಟಕವಾಗಿ ಪರಿಣಮಿಸುತ್ತಿದೆ. ದೇಶಾದ್ಯಂತ ವ್ಯಾಪಿಸಿರುವ ಆನ್ಲೈನ್ ಲೋನ್ನ ಹಿಂದೆ ದೊಡ್ಡ ವಂಚನಾ ಜಾಲವೇ ಅಡಗಿದೆ.
ಸಾಮಾನ್ಯವಾಗಿ ಸಾಲ ಬೇಕಾದಾಗ ಬ್ಯಾಂಕ್ಗಳು ನಾನಾ ದಾಖಲೆಗಳನ್ನು ಕೇಳುವ ಕಾರಣ ಕೆಲವು ಸುಲಭದಲ್ಲಿ ಸಿಗುವ ಆನ್ಲೈನ್ ಸಾಲಕ್ಕೆ ಮೊರೆ ಹೋಗುತ್ತಾರೆ. 4 ದಿನದಿಂದ ಒಂದು ತಿಂಗಳವರೆಗೆ ಆ ಸಾಲಗಳನ್ನು ನೀಡಲಾಗುತ್ತಿದೆ. ಸಾಲಕ್ಕೆ ಆನ್ಲೈನ್ ಅರ್ಜಿ ಸಲ್ಲಿಸುವಾಗ ಆಧಾರ್, ಪಾನ್, ಬ್ಯಾಂಕ್ ಖಾತೆ, ಉದ್ಯೋಗ, ವೇತನ ವಿವರ ಜತೆಗೆ ಸಾಲಗಾರನ ಭಾವಚಿತ್ರಗಳನ್ನು ಪಡೆಯಲಾಗುತ್ತದೆ.
ಆನ್ಲೈನ್ ಸಾಲ ಪಡೆದ ಬಳಿಕ ನಿಗದಿತ ಕಂತಿನಂತೆ ಪಾವತಿ ಮಾಡಬೇಕು. ಒಂದು ವೇಳೆ ಪಾವತಿ ಮಾಡದಿದ್ದರೆ ಪ್ರಾರಂಭಿಕ ಹಂತದಲ್ಲಿ ಮೊಬೈಲ್ ಕರೆ ಮಾಡಿ ಸಾಲ ಕಟ್ಟಲು ಒತ್ತಡ ಹಾಕಲಾಗುತ್ತದೆ. ಎರಡನೇ ಹಂತದಲ್ಲಿ ಗೂಂಡಾಗಳಿಂದ ಕರೆ ಮಾಡಿ ಬೆದರಿಕೆ ಹಾಕಲಾಗುತ್ತದೆ. ಇದಾದ ಬಳಿಕವೂ ಕಟ್ಟದಿದ್ದರೆ ಆ್ಯಪ್ ಮೂಲಕ ಸಾಲಗಾರನ ಹತ್ತಿರ ಸಂಬಂಧಿರು, ಗೆಳೆಯರ ದತ್ತಾಂಶ ಪಡೆದು ಅವರಿಗೆ ಕರೆ, ಸಂದೇಶ ಕಳುಹಿಸಿ ಹಣ ಕಟ್ಟಲು ಒತ್ತಡ ಹಾಕುತ್ತಾರೆ. ನಾಲ್ಕನೇ ಅಸ್ತ್ರವಾಗಿ ಸಾಲಗಾರನ ಫೊಟೋದ ಮೇಲೆ ‘ವಂಚಕ’ ಸಂದೇಶ ಹಾಕಿ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕುತ್ತಾರೆ. ಇದರಿಂದ ಬೇಸತ್ತು ಹಲವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆದ ಇಂತಹ ಆನ್ಲೈನ್ ಸಾಲ ನೀಡುವ ಮೈಕ್ರೋ ಫೈನಾನ್ಸ್ ಆ್ಯಪ್ಗಳು ಸಕ್ರಿಯ.
ಆನ್ಲೈನ್ ಸಾಲದ ಈ ಕಂಪನಿಗಳಿಗೆ ಆರ್ಬಿಐಯಡಿ ನೋಂದಣಿಯಾಗಿರುವುದಿಲ್ಲ.
ಆನ್ಲೈನ್ ಸಾಲ ಪಡೆಯಲು 25-45 ವರ್ಷದ ತಿಂಗಳ ವೇತನ ಪಡೆಯುವ ಯುವಕರೇ ಟಾರ್ಗೆಟ್ ‘ಆನ್ಲೈನ್ ಲೋನ್ ಪಡೆದು ಮರು ಪಾವತಿಸಲಾಗದೆ ಉಡುಪಿಯಲ್ಲಿ ಯುವಕನೊಬ್ಬ ಕೆಲವು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡರೆ, ಪಕ್ಷಿಕೆರೆಯಲ್ಲಿ ಸೋಮವಾರ ಯುವಕನೊಬ್ಬ ಆತ್ಮಹತ್ಯೆ ಮಾಡಿದ್ದಾನೆ. ಈತನ ಆನ್ಲೈನ್ ಆ್ಯಪ್ ಸಾಲ, ಬ್ಯಾಂಕ್ ವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮೇಲ್ನೋಟಕ್ಕೆ ಯಾವುದೇ ದಾಖಲೆ ಲಭಿಸಿಲ್ಲ. ತಂತ್ರಜ್ಞಾನ ಬಳಕೆ ಜತೆ ಅದರ ಸಾಧಕ – ಬಾಧಕ ಬಗ್ಗೆ ಹೆಚ್ಚಿನ ಜಾಗೃತಿ ವಹಿಸದಿದ್ದರೆ ಜನರು ಈ ರೀತಿಯ ಆಪತ್ತು ಎದುರಿಸಬೇಕಾಗಿದೆ’ ಎಂದು ಮಂಗಳೂರು ಪೊಲೀಸ್ ಆಯುಕ್ತ ಹೇಳಿದ್ದಾರೆ.