ಬೆಳ್ತಂಗಡಿ : ದೇವರ ಗುರುಗಳ ಅಪ್ಪಣೆ ಹಾಗೂ ಆಜ್ಞೆಯಂತೆ ತಾಲೂಕಿನ ಎಲ್ಲಾ ಗ್ರಾಮಸ್ಥರ ಸೇವಾಮನೋಭಾವದ ಕೆಲಸದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರಗಿದೆ. ಪಾದಪೂಜೆ, ಭಜನೆ,ಅನ್ನ ದಾಸೋಹದ ಮೂಲಕ ಲೋಕದ ಪಿಡುಗುಗಳನ್ನು ದೂರೀಕರಿಸಲು ಚಾತುರ್ಮಾಸ್ಯ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರ ಚಾತುರ್ಮಾಸ್ಯದ 42ನೇ ಹಾಗೂ ಕೊನೆಯ ದಿನವಾದ ಗುರುವಾರ ಪಾದ ಪೂಜೆ ನೆರವೇರಿಸಿ ಮಾತನಾಡಿದರು.
ಜಗತ್ತಿಗೆ ಒಳಿತಾಗಲಿ ಎಂಬ ಸಂಕಲ್ಪದೊಂದಿಗೆ ಸ್ವಾಮೀಜಿಗಳು ಕಠಿಣ ಚಾತುರ್ಮಾಸ್ಯವ್ರತ ಕೈಗೊಂಡಿದ್ದು ಜಾತಿ, ರಾಜಕೀಯ ಇತ್ಯಾದಿ ಭಾವನೆಗಳನ್ನು ಬದಿಗಿರಿಸಿ ಸಮಾಜದ ಉದ್ಧಾರದ ಸಂಕಲ್ಪದಲ್ಲಿ ಪ್ರೇರಣಾದಾಯಿ ಕಾರ್ಯಕ್ರಮ ನಡೆದಿದೆ ಎಂದು ಹೇಳಿದರು.
ಜಮಾ ಉಗ್ರಾಣದ ಮುತ್ಸದ್ದಿ ಬಿ.ಭುಜಬಲಿ, ನಿವೃತ್ತ ಎಸ್ ಪಿ ಹಾಗೂ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಜಯಂತ ಕೋಟ್ಯಾನ್ ಕಾರ್ಯದರ್ಶಿ ಶ್ರೀನಿವಾಸ್ ರಾವ್, ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಜಯಂತ ಗೌಡ ಗುರಿ ಪ್ಪಳ್ಳ, ಕಡಿರುದ್ಯಾವರ ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್, ನಾವೂರು ಗ್ರಾಪಂ ಅಧ್ಯಕ್ಷ ಗಣೇಶ್ ಗೌಡ, ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಮಲವಂತಿಗೆ ಗ್ರಾಪಂ ಉಪಾಧ್ಯಕ್ಷ ದಿನೇಶ ಗೌಡ,ಬಂಗಾಡಿ ಸಿಎ ಬ್ಯಾಂಕಿನ ಅಧ್ಯಕ್ಷ ಹರೀಶ್ ಸಾಲ್ಯಾನ್, ಶಶಿಧರ ಎಂ. ಕಲ್ಮಂಜ ಮತ್ತಿತರರು ಉಪಸ್ಥಿತರಿದ್ದರು