ಕಾಸರಗೋಡು: ಬದಿಯಡ್ಕದಿಂದ ನಾಪತ್ತೆಯಾಗಿದ್ದ ವೈದ್ಯರ ಮೃತ ದೇಹ ಕುಂದಾಪುರ ಸಮೀಪ ರೈಲ್ವೆ ಹಳಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಬದಿಯಡ್ಕದ ದಂತ ವೈದ್ಯ ಡಾ. ಎಸ್. ಕೃಷ್ಣ ಮೂರ್ತಿ (57) ಮೃತ ಪಟ್ಟವರು. ರೈಲ್ವೆ ಹಳಿಯಲ್ಲಿ ಮೃತ ದೇಹ ಪತ್ತೆಯಾದ ಬಗ್ಗೆ ಲಭಿಸಿದ ಮಾಹಿತಿಯಂತೆ ಕೃಷ್ಣ ಮೂರ್ತಿ ರವರ ಕುಟುಂಬಸ್ಥರು ಕುಂದಾಪುರಕ್ಕೆ ತೆರಳಿ ಗುರುತು ಪತ್ತೆ ಹಚ್ಚಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಶುಕ್ರವಾರ ಊರಿಗೆ ತರಲಾಗುವುದು. ನವಂಬರ್ ಎಂಟರಂದು ಮಧ್ಯಾಹ್ನ ಬಳಿಕ ವೈದ್ಯರು ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು.
ವೈದ್ಯರ ಬೈಕ್ ಕುಂಬಳೆ ಪೇಟೆಯಲ್ಲಿ ಪತ್ತೆಯಾಗಿತ್ತು. ಮೊಬೈಲ್ ಕ್ಲಿನಿಕ್ ನಲ್ಲೇ ಬಿಟ್ಟು ತೆರಳಿ ದ್ದರು. ಕ್ಲಿನಿಕ್ ಗೆ ಬಂದಿದ್ದ ಮಹಿಳೆ ಜೊತೆ ವೈದ್ಯರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತಂಡವೊಂದು ಕ್ಲಿನಿಕ್ ಗೆ ತೆರಳಿ ವೈದ್ಯರನ್ನು ತರಾಟೆಗೆ ತೆಗೆದು ಬೆದರಿಕೆ ಯೊಡ್ಡಿದ್ದಾರೆ ಎನ್ನಲಾಗಿದೆ. ಇದಲ್ಲದೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ಬೆಳವಣಿಗೆ ಬಳಿಕ ಡಾ . ಕೃಷ್ಣಮೂರ್ತಿ ನಿಗೂಢವಾಗಿ ನಾಪತ್ತೆಯಾಗಿದ್ದರು.
ನಾಪತ್ತೆ ಹಿನ್ನಲೆಯಲ್ಲಿ ಬದಿಯಡ್ಕ ಪೊಲೀಸರು ಕೇರಳ ಹಾಗೂ ಕರ್ನಾಟಕದ ಪೊಲೀಸ್ ಠಾಣೆ ಗಳಿಗೆ ಮಾಹಿತಿ ನೀಡಿದ್ದರು. ವೈದ್ಯರನ್ನು ಕೂಡಲೇ ಪತ್ತೆ ಹಚ್ಚುವಂತೆ ಒತ್ತಾಯಿಸಿದಂತ ವೈದ್ಯರ ಸಂಘಟನೆಯ ಕಾಸರಗೋಡು ಘಟಕ ನೇತೃತ್ವದಲ್ಲಿ ಗುರುವಾರ ಬದಿಯಡ್ಕದಲ್ಲಿ ಧರಣಿ ಸತ್ಯಾಗ್ರಹ ನಡೆದಿತ್ತು.