ಕಾಸರಗೋಡು: ಶಸ್ತ್ರಕ್ರಿಯೆಗೆ ರೋಗಿಯಿಂದ ಲಂಚ ಪಡೆದ ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯನನ್ನು ವಿಜಿಲೆನ್ಸ್ ಬಂಧಿಸಿದೆ.
ವೈದ್ಯ ಡಾ. ವೆಂಕಟಗಿರಿನನ್ನು ನುಳ್ಳಿಪ್ಪಾಡಿಯಲ್ಲಿರುವ ಮನೆಯಿಂದ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿ ವಿಜಿಲೆನ್ಸ್ ಬಂಧಿಸಿದೆ. ಮಧೂರು ಪಟ್ಲದ ನಿವಾಸಿಯೊಬ್ಬರು ನೀಡಿದ ದೂರಿನಂತೆ ದಾಳಿ ಡೆಸಿ ಕ್ರಮ ತೆಗೆದುಕೊಳ್ಳಲಾಗಿದೆ. ಹರ್ನಿಯಾ ರೋಗದ ಚಿಕಿತ್ಸೆಗೆ ಆಗಮಿಸಿದ್ದು, ಈ ವೇಳೆ ಶಸ್ತ್ರಕ್ರಿಯೆ ಅಗತ್ಯ ಇರುವುದಾಗಿ ವೈದ್ಯ ಸೂಚಿಸಿದ್ದು, ಡಿಸೆಂಬರ್ ತಿಂಗಳಲ್ಲಿ ಶಸ್ತ್ರಕ್ರಿಯೆ ನಡೆಸುವುದಾಗಿ ಎರಡು ಸಾವಿರ ರೂ. ನೀಡುವಂತೆ ಈ ವ್ಯಕ್ತಿಗೆ ವೈದ್ಯ ತಿಳಿಸಿದ್ದನು ಎನ್ನಲಾಗಿದೆ.
ಈ ಬಗ್ಗೆ ವಿಜಿಲೆನ್ಸ್ ಗೆ ಇವರು ಮಾಹಿತಿ ನೀಡಿದ್ದರು. ಮಂಗಳವಾರ ಸಂಜೆ ನುಳ್ಳಿಪ್ಪಾಡಿಯಲಿರುವ ಮನೆಗೆ ತೆರಳಿ ಎರಡು ಸಾವಿರ ರೂ. ಹಸ್ತಾ೦ತರಿಸಿದ್ದು, ಇದರ ನಡುವೆ ಹೊಂಚು ಹಾಕಿ ಕುಳಿತಿದ್ದ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿ ವೈದ್ಯನನ್ನು ವಶಕ್ಕೆ ಪಡೆದುಕೊಡರು. ಅಬ್ಬಾಸ್ ನೀಡಿದ ಎರಡು ಸಾವಿರ ರೂ. ವನ್ನು ವಶಕ್ಕೆ ಪಡೆದುಕೊಂಡರು. ೨೦೧೯ರಲ್ಲೂ ಡಾ. ವೆಂಕಟಗಿರಿ ವಿರುದ್ಧ ಲಂಚ ಪಡೆದ ಬಗ್ಗೆ ವಿಜಿಲೆನ್ಸ್ ಗೆ ದೂರು ಲಭಿಸಿತ್ತು.