ಕಾಸರಗೋಡು : ಸಿಡಿಲು ಬಡಿದು ಕಗ್ಗಲ್ಲು ಕೋರೆಯಲ್ಲಿ ಉಂಟಾದ ಸ್ಪೋಟದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು , ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ವೆಳ್ಳರಿಕುಂಡು ತಾಲೂಕಿನ ತಾಯನ್ನೂರು ಕೋಳಿಯಾರು ಎಂಬಲ್ಲಿ ನಡೆದಿದೆ.
ರಮೇಶ್ ( 45) ಮೃತಪಟ್ಟವರು. ಪ್ರಭಾಕರ ಮತ್ತು ಸುಮಾ ಗಂಭೀರ ಗಾಯಗೊಂಡಿದ್ದಾರೆ. ಮೂವರು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಸಂಜೆ ನಾಲ್ಕು ಗಂಟೆ ಸುಮಾರಿಗೆ ಭಾರೀ ಗುಡುಗು ಮಿಂಚು ಸಹಿತ ಮಳೆ ಸುರಿದಿದ್ದು , ಈ ಸಂದರ್ಭದಲ್ಲಿ ಕೋರೆಗೆ ಸಿಡಿಲು ಬಡಿದಿದ್ದು , ಅಲ್ಲಿದ್ದ ಸ್ಪೋಟಕ ಸಿಡಿದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಮೂವರನ್ನು ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ರಮೇಶ್ ಮೃತಪಟ್ಟರು. ಅಂಬಲತ್ತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.