ಕಾಸರಗೋಡು : ಲಾರಿ ಚಾಲಕನ ನಿಯಂತ್ರಣಕ್ಕೆ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಮೃತ ಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ಪಾಣತ್ತೂರು ಸಮೀಪದ ಪರಿಯಾರದಲ್ಲಿ ನಡೆದಿದೆ.
ಪಾಣತ್ತೂರು ಕುಂಡಪಳ್ಳಿಯ ವಿನೋದ್ ( 45) , ನಾರಾಯಣ ( 50) , ಕೆ .ಎಂ ಮೋಹನ್ ( 40) ,ಸುಂದರ ( 40) ಮೃತಪಟ್ಟವರು ಲಾರಿ ಚಾಲಕ ವಿಜಯನ್ ಕ್ಲೀನರ್ ಅನಿಶ್ , ವೇಣುಗೋಪಾಲ್ , ಪ್ರಸನ್ನ ಗಾಯಗೊಂಡವರು ಮರ ಹೇರಿಕೊಂಡು ಕಲ್ಲಪಳ್ಳಿ ಯಿಂದ ಪಾಣತ್ತೂರಿಗೆ ತೆರಳುತ್ತಿದ್ದ ಲಾರಿ ಪರಿಯಾರ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದ್ದು , ಲಾರಿ ಯಲ್ಲಿದ್ದ ಮರದ ದಿಮ್ಮಿಗಳೆಡೆ ಸಿಲುಕಿದ್ದ ಆರು ಮಂದಿಯನ್ನು ಸ್ಥಳೀಯರು , ಅಗ್ನಿಶಾಮಕದ ದಳದ ಸಿಬಂದಿಗಳು ಹರಸಾಹಸ ಪಟ್ಟು ಹೊರತೆಗೆದರೂ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ನಾರಾಯಣ ಆಸ್ಪತ್ರೆಯಲ್ಲಿ ಮೃತಪಟ್ಟರು.
ಬ್ರೇಕ್ ವೈಫಲ್ಯ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತಪಾಸಣೆಯಿಂದ ತಿಳಿದು ಬಂದಿದೆ. ಲಾರಿಯಲ್ಲಿ ಒಂಭತ್ತು ಮಂದಿ ಇದ್ದರೆನ್ನಲಾಗಿದೆ . ಮೃತಪಟ್ಟವರು ಲೋಡಿಂಗ್ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಮಗುಚಿ ಬಿದ್ದಾಗ ಕಾರ್ಮಿಕರು ಮರದ ದಿಮ್ಮಿಗಳಡಿ ಸಿಲುಕಿ ಈ ದುರ್ಘಟನೆ ನಡೆದಿದೆ.ಘಟನಾ ಸ್ಥಳಕ್ಕೆ ಉಪಜಿಲ್ಲಾಧಿಕಾರಿ ಡಿ . ಆರ್ ಮೇಘಶ್ರೀ , ತಹಶೀಲ್ದಾರ್ ಮುರಳಿ ಪೊಲೀಸರು , ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ