ಭಾಷಾವಾರು ಪ್ರಾಂತ್ಯ ವಿಂಗಡಣೆಗೂ ಮುನ್ನ ಕಾಸರಗೋಡು ಮದ್ರಾಸ್ ಸಂಸ್ಥಾನದ ಭಾಗವಾಗಿದ್ದಾಗ ನಿರ್ಮಿಸಲಾದ ಶಿರಿಯ ಅಣೆಕಟ್ಟು ಇದೀಗ ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮೂಲೆಗುಂಪಾಗಿದೆ. ಆದರೆ, ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಅಣೆಕಟ್ಟು ವೀಕ್ಷಣೆಗೆ ಕಾಸರಗೋಡು ಜಿಲ್ಲೆಯ ನಾನಾ ಭಾಗಗಳಿಂದ ಜನರು ಆಗಮಿಸುತ್ತಿದ್ದು, ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಶಿರಿಯ ಅಣೆಕಟ್ಟು ಪ್ರದೇಶದಲ್ಲಿ ನೀರಿನ ಭೋರ್ಗರೆತದ ಸವಿ ಅನುಭವಿಸುವುದಕ್ಕಾಗಿ ಶನಿವಾರ ಮತ್ತು ಭಾನುವಾರ ತಂಡೋಪ ತಂಡವಾಗಿ ಈ ಪ್ರದೇಶಕ್ಕೆ ಜನರು ಬರುತ್ತಿದ್ದಾರೆ. ಆದರೆ ಕೆಲವರು ಅಪಾಯಕಾರಿ ನೀರಾಟಕ್ಕೆ ತೊಡಗುವುದು ಆತಂಕಕ್ಕೆ ಕಾರಣವಾಗಿದೆ. ಯುವಕರು ಅಣೆಕಟ್ಟಿನ ಮೇಲ್ಭಾಗದಿಂದ ನೀರಿಗೆ ಧುಮುಕಿ ಈಜಾಡುವುದು ಕಂಡುಬರುತ್ತಿದೆ. ಯುವಕರ ಸಾಹಸ ಪ್ರದರ್ಶನ ನೋಡಲೆಂದೇ ಜನ ಬರುತ್ತಾರೆ.
ಅದೇ ರೀತಿ ಇಲ್ಲಿ ಇತ್ತೀಚೆಗೆ ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಕಾಣುತ್ತಿವೆ.
ಪುತ್ತಿಗೆ ಗ್ರಾಪಂ ವ್ಯಾಪ್ತಿಯ ದೇರಡ್ಕ ಹಾಗೂ ಎಣ್ಮಕಜೆ ಗ್ರಾಪಂ ಮಣಿಯಂಪಾರೆ ಸಮೀಪದ ಈ ಅಣೆಕಟ್ಟಿಗೆ ಏಳು ದಶಕಗಳ ಇತಿಹಾಸವಿದೆ. ಎಣ್ಮಕಜೆ, ಪುತ್ತಿಗೆ, ಪೈವಳಿಕೆ ಗ್ರಾಪಂಗಳ ಸುಮಾರು 600 ಎಕರೆ ಕೃಷಿ ಭೂಮಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದ್ದರೂ, ಪ್ರಸ್ತುತ ಅಣೆಕಟ್ಟು ಶಿಥಿಲಾವಸ್ಥೆಗೆ ತಲುಪಿದೆ.
ಕಪ್ಪು ಕಲ್ಲಿನಿಂದ ಕಟ್ಟಲಾದ ಅಣೆಕಟ್ಟು ಕೃಷಿ ಮತ್ತು ನೀರಾವರಿ ಕಳಪೆ ನಿರ್ವಹಣೆಯಿಂದ ಉಪಯೋಗ ಶೂನ್ಯವಾಗುತ್ತಿದೆ. ಅಣೆಕಟ್ಟಿನಲ್ಲಿಹೂಳು ತುಂಬಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೂಳನ್ನು ತೆಗೆಸಿ ಅಣೆಕಟ್ಟಿನ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನವನ್ನು ಕೃಷಿ ಮತ್ತು ನೀರಾವರಿ ಇಲಾಖೆ ಕೈಗೊಂಡಿಲ್ಲ. ಮತ್ತೊಂದೆಡೆ ಬೇಸಿಗೆಯಲ್ಲಿಹದಗೆಟ್ಟ ಕ್ರಷ್ ಗೇಟ್ಗಳ ಮುಖಾಂತರ ನೀರು ನಿರಂತರ ಪೋಲಾಗುತ್ತಿದೆ. ಮಳೆಗಾಲದಲ್ಲಿನೀರಿನ ಜತೆ ಬರುವ ಮರಮಟ್ಟುಗಳು, ಮರದ ದಿಮ್ಮಿಗಳು ಅಣೆಕಟ್ಟಿನ ಮರದ ಹಲಗೆಗಳ ಮಧ್ಯೆ ನಿಂತು ರಂಧ್ರಗಳು ಉಂಟಾಗುವುದು ನೀರಿನ ಸೋರಿಕೆಗೆ ಕಾರಣವಾಗುತ್ತಿದೆ.
ಬೇಸಿಗೆಯಲ್ಲೂ ಮೂರು ಗ್ರಾಮ ಪಂಚಾಯತ್ ಗಳಿಗಾಗುವಷ್ಟು ಕುಡಿಯುವ ನೀರು ಸಹಿತ ನೀರಾವರಿಗೆ ಅಗತ್ಯವಾದ ನೀರು ಪೂರೈಸುವ ಸಾಮರ್ಥ್ಯವಿರುವ ಅಣೆಕಟ್ಟು ಸಮರ್ಪಕ ನಿರ್ವಹಣೆ ಇಲ್ಲದೆ ನಿಷ್ಪ್ರಯೋಜಕವಾಗುತ್ತಿದೆ. ಪ್ರಸ್ತುತ 50ರಿಂದ 60 ಎಕರೆ ಪ್ರದೇಶಗಳಿಗಷ್ಟೆ ಈ ಅಣೆಕಟ್ಟಿನಿಂದ ನೀರು ಪೂರೈಕೆಯಾಗುತ್ತಿದೆ.
ಅಲ್ಲೊಂದು ಸುಂದರ ಝರಿ ಪಕೃತಿ ಮಾತೆಯ ಮಡಿಲಲ್ಲಿ ಹುಟ್ಟಿ ನಳನಳಿಸುತ್ತಿರುವ ಪಾವನ ಸುಧೆ. ಬಂಡೆಗಳ ನಡುವೆ ಬಳುಕುತ್ತಾ ಬರುವ ಜಲಮಾತೆ. ಈ ಸುಂದರ ದೃಶ್ಯಗಳಿಗೆ ಕಪ್ಪು ಚುಕ್ಕಿಯಂತೆ ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಚೀಲಗಳು. ಈ ದೃಶ್ಯಗಳು ಕಂಡುಬರುವುದು ಕಾಸರಗೋಡು ಶೇಣಿ ಸಮೀಪದ ಶಿರಿಯ ಅಣೆಕಟ್ಟಿನ ಬಳಿ.
೧೯೮೬ ರಲ್ಲಿ ನಿರ್ಮಾಣಗೊಂಡ ಶಿರಿಯ ಅಣೆಕಟ್ಟು ಇಂದು ನಿತ್ಯ ಪ್ರವಾಸಿಗರ ತಾಣವಾಗಿದೆ. ಶಿರಿಯ ಪ್ರಾಕೃತಿಕ ರಮಣೀಯ ಸೌಂದರ್ಯವನ್ನು ಸವಿಯಲು ಪ್ರತಿದಿನ ಸಂಜೆ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಿಶೇಷವಾಗಿ ಪ್ರವಾಸಿಗರ ಪ್ರಿ ವೆಡ್ಡಿಂಗ್ ಚಿತ್ರೀಕರಣ ಫೋಟೊ ಶೂಟ್ಗಳಿಗೆ ಈ ಸುಂದರತಾಣವು ಸಾಕ್ಷಿಯಾಗಿದೆ. ಆದರೆ ಫೋಟೊ ಶೂಟ್ ಭರದಲ್ಲಿ ಸ್ವಚ್ಛತೆಯನ್ನು ಮರೆತಿರುವ ಪ್ರವಾಸಿಗರು ಪ್ರೇಕ್ಷಣೀಯ ಪ್ರದೇಶವನ್ನು ಪ್ಲಾಸ್ಟಿಕ್ ಮಯವಾಗಿಸುತ್ತಿರುವುದು ಶೋಚನೀಯ ವಿಚಾರ.
ಅಲ್ಲದೇ ಅಣೆಕಟ್ಟಿನ ಸುತ್ತಲಿನ ಪ್ರದೇಶದಲ್ಲಿ ಪ್ರವಾಸಿಗರು ಸ್ನಾನ ಮಾಡುವುದು,ತ್ಯಾಜ್ಯಗಳನ್ನು ಎಸೆಯುವುದು , ಬಟ್ಟೆಗಳನ್ನು ಒಗೆಯುವುದು ಕಂಡುಬಂದಿದೆ.ಇದು ಪರಿಸರ ಮಾಲಿನ್ಯವನ್ನು ತಡೆಯುವುದರ ಜೊತೆಗೆ ಪ್ರವಾಸಿ ತಾಣದ ಸೌಂದರ್ಯವನ್ನು ಮಲಿನಗೊಳಿಸುತ್ತಿದೆ.ಮೂವತ್ತೆರಡು ವರುಷಗಳ ಇತಿಹಾಸವಿರುವ ಈ ಆಣೆಕಟ್ಟು ಪ್ರವಾಸಿಗರ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.