ಕಾಸರಗೋಡು : ಕೇರಳದಲ್ಲಿ ಮಾರ್ಚ್ 23ರ ಮಧ್ಯರಾತ್ರಿಯಿಂದ ಆರಂಭಗೊಂಡಿದ್ದ ಖಾಸಗಿ ಬಸ್ ಮುಷ್ಕರವನ್ನು ಹಿಂಪಡೆಯಲಾಗಿದೆ. ರಾಜ್ಯದ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಾರಿಗೆ ಖಾತೆ ಸಚಿವ ಆಂಟನಿ ರಾಜು ಅವರೊಂದಿಗೆ ತಿರುವನಂತಪುರದಲ್ಲಿ ಭಾನುವಾರ ನಡೆಸಿದ ಸಭೆಯಲ್ಲಿ ಮುಷ್ಕರ ಕೈಬಿಡುವ ನಿರ್ಧಾರಕ್ಕೆ ಬರಲಾಗಿದೆ.
ಬಸ್ ಪ್ರಯಾಣ ದರವನ್ನು ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿರುವುದರಿಂದ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಬಸ್ ಮಾಲೀಕರು ತಿಳಿಸಿದ್ದಾರೆ.
ಬಸ್ ಮಾಲೀಕರ ಸಂಘದ ಮನವಿ ಮೇರೆಗೆ ಮಾತುಕತೆ ನಡೆದಿದೆ ಎಂದು ಸರಕಾರವು ಹೇಳಿಕೆ ನೀಡಿದೆ. ಸಭೆಯಲ್ಲಿ ಟಿಕೆಟ್ ದರ ಹೆಚ್ಚಿಸುವ ಕುರಿತು ಭರವಸೆ ನೀಡಲಾಗಿದೆ ಆದರೆ ಅದನ್ನು ಜಾರಿಗೆ ತರುವ ದಿನಾಂಕವನ್ನು ಮುಂದೆ ತೀರ್ಮಾನಿಸಲಾಗುವುದು ಎಂದು ಸರಕಾರವು ತಿಳಿಸಿದೆ.
ಇದೇ ವೇಳೆ ಪ್ರಯಾಣ ದರ ಏರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಖಾಸಗಿ ಬಸ್ ಮಾಲೀಕರು ಮುಷ್ಕರ ನಡೆಸಿದ್ದಾರೆ. ಇದರಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಬೇಕಾಯಿತು. ಸರಕಾರದ ನಿರ್ಲಕ್ಷ್ಯ ಧೋರಣೆಯೇ ಜನರು ಸಮಸ್ಯೆ ಎದುರಿಸಲು ಕಾರಣವಾಯಿತು ಎಂದು ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ.