ಚಿಕ್ಕಬಳ್ಳಾಪುರ: ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೂ ಶಾಲಾ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಬೇಕು ಹೈಕೋರ್ಟ್ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ಕೈವಾರ ತಾತಯ್ಯ ಜಯಂತ್ಯುತ್ಸವದಲ್ಲಿ ಭಾನುವಾರ ಮಾತನಾಡಿದ ಸುಧಾಕರ್ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನಕ್ಕೆ ನಾವೆಲ್ಲರೂ ಗೌರವ ನೀಡಬೇಕಿದೆ. ಶಾಲೆಗಳಲ್ಲಿನ ಸಮಾನ ಮನಸ್ಥಿತಿ, ಸಮಾನ ಮನೋಭಾವ ಹಾಗೇ ಇರಬೇಕು. ಪರೀಕ್ಷೆಯನ್ನು ಚೆನ್ನಾಗಿ ಬರೆದು ಉತ್ತಮ ಅಂಕ ಗಳಿಸಿ.
ನಮ್ಮ ನಾಡು ಶಾಂತಿಯ ತೋಟ ಎಂದು ಕುವೆಂಪು ಹೇಳಿದ್ದಾರೆ. ಶಾಂತಿಯ ತೋಟಕ್ಕೆ ನೀವೆಲ್ಲರೂ ಪ್ರೇರಣೆ ಆಗಬೇಕು. ಜಾತ್ಯಾತೀತವಾಗಿ, ಧರ್ಮಾತೀತವಾಗಿ ನಮ್ಮ ಸರ್ಕಾರ ನಿಮ್ಮ ಜತೆಗೆ ಇದೆ ಎಂದರು.
ನಾಳೆಯಿಂದ(ಮಾ.28) ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದೆ. ಎಲ್ಲ ವಿದ್ಯಾರ್ಥಿಗಳೂ ಸಮವಸ್ತ್ರ ಧರಿಸಿಯೇ ಎಕ್ಸಾಂಗೆ ಹಾಜರಾಗಬೇಕು. ಹಿಜಾಬ್ ಧರಿಸಿ ಬಂದವರಿಗೆ ಪರೀಕ್ಷೆಗೆ ಪ್ರವೇಶ ಇಲ್ಲ ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.