ಕಾಸರಗೋಡು: ಖ್ಯಾತ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಸೋಮವಾರ ಕಾಸರಗೋಡಿನ ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ಥರ ಮನೆ ಹಾಗೂ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು , ಸರಕಾರ ಸಂತ್ರಸ್ಥರಿಗೆ ಸೂಕ್ತ ಚಿಕಿತ್ಸೆ, ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರಕಾರ ಚಿಕಿತ್ಸೆಗೆ ವ್ಯವಸ್ಥೆ ಮಾಡದೆ ಖಾಸಗಿ ಆಸ್ಪತ್ರೆಗಳಿಗೆ ಸಂತ್ರಸ್ಥರು ತರಳುವ ಪರಿಸ್ಥಿತಿ ಉಂಟಾಗಿದೆ . ಚಿಕಿತ್ಸೆಗೆ ಹಣ ಇಲ್ಲದೆ ಒದ್ದಾಡುವ ಸ್ಥಿತಿ ಒದಗಿ ಬಂದಿದೆ . ಇದಲ್ಲದೆ ಸೂಕ್ತ ಚಿಕಿತ್ಸೆ ಲಭಿಸದೆ ಹಲವು ಜೀವಗಳು ಬಲಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸರಕಾರ ಕೂಡಲೇ ಕಣ್ತೆರೆಯಬೇಕು ಎಂದು ಹೇಳಿದರು.
ಎಂಡೋಸಲ್ಫಾನ್ ಸಂತ್ರಸ್ಥ ರೋಗಿಗಳಿಗೆ ಚಿಕಿತ್ಸೆ ನೀಡಲು ಏಮ್ಸ್ ನಂತಹ ರಾಷ್ಟ್ರ ಮಟ್ಟದ ಆಸ್ಪತ್ರೆ ಕಾಸರಗೋಡಿನಲ್ಲಿ ಅಗತ್ಯ ಇದೆ . ಪುನರ್ವಸತಿ ಕೇಂದ್ರವನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ಥರ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಗಳ ಜೊತೆಯೂ ಮೇಧಾ ಪಾಟ್ಕರ್ ಮಾತುಕತೆ ನಡೆಸಿದರು. ಪರಿಸರ ಹೋರಾಟಗಾರ ಸಿ .ಆರ್ ನೀಲಕಂಠನ್, ಅಂಬಲತ್ತರ ಕುಞಕೃಷ್ಣನ್ , ನ್ಯಾಯವಾದಿ ರಾಜೇಂದ್ರನ್ , ಕೆ . ಬಿ ಮುಹಮ್ಮದ್ ಕುಂ ಞ, ಡಾ . ಡಿ . ಸುರೇಂದ್ರನಾಥ್,ರಹಮಾನ್ ಬಂದ್ಯೋಡು , ಸುಬೈರ್ ಪಡ್ಪು ಮೊದಲಾದವರು ಜೊತೆಗಿದ್ದರು.