ಕಾಸರಗೋಡು: ಎಂಡೋಸಲ್ಫಾನ್ ಬಾಧಿತರಾಗಿದ್ದ ಕಾಸರಗೋಡಿನ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಜಿಲ್ಲೆಯ ಅಂಬಲತ್ತರ ಮುಕ್ಕಿಜಿಯ ನಿವಾಸಿ ಮನು ಅವರ ಐದು ವರ್ಷದ ಪುತ್ರಿ ಅಮೇಯ ಮತ್ತು ಅಜಾನೂರಿನ ಮೊಯ್ದು ಅವರ 11 ವರ್ಷದ ಪುತ್ರ ಮೊಹಮ್ಮದ್ ಇಸ್ಮಾಯಿಲ್ ಮೃತಪಟ್ಟವರು. ಕಾಞಂಗಾಡಿನ ಜಿಲ್ಲಾಸ್ಪತ್ರೆಯಲ್ಲಿ ಅಮೇಯ ಸಾವಿಗೀಡಾದಳು. ಮೊಹಮ್ಮದ್ ಇಸ್ಮಾಯಿಲ್ ಕರ್ನಾಟಕದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಳು.
ಇದೇ ವೇಳೆ ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಗತ್ಯದ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳು ಹೆಚ್ಚುತ್ತಿರುವ ನಡುವೆಯೇ ಇಬ್ಬರು ಮಕ್ಕಳ ಸಾವು ಸಂಭವಿಸಿದೆ. ಎಂಡೋ ಬಾಧಿತರ ನ್ಯಾಯಯುತ ಬೇಡಿಕೆಗಳನ್ನು ಕೇರಳ ಮುಖ್ಯಮಂತ್ರಿ , ಆರೋಗ್ಯ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪರಿಗಣಿಸಿಲ್ಲ ಎಂದು ಆರೋಪಿಸಲಾಗಿದೆ.
ಕಳೆದ ಒಂದೂವರೆ ವರ್ಷದಿಂದ ನಡೆಯದ ಜಿಲ್ಲಾ ಮಟ್ಟದ ರೇಡಿಯಲ್ ಸೆಲ್ ಸಭೆ ನಡೆಸಿ ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೊಳಿಸಬೇಕು, ಎಂಡೋ ಸಂತ್ರಸ್ತರನ್ನು ಮುಖ್ಯಮಂತ್ರಿ ಭೇಟಿಯಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಎಂಡೋಸಲ್ಫಾನ್ ಪೀಡಿತ ಜನಪರ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.