ಕಾಸರಗೋಡು : ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಅವಧಿಯ ಎಡರಂಗ ಸರಕಾರದ 100 ದಿನ ಕ್ರಿಯಾ ಯೋಜನೆಯಂಗವಾಗಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ವ್ಯಾಪ್ತಿಯವರಿಗೆ ಹಕ್ಕು ಪತ್ರ ವಿತರಣೆ ಹಾಗೂ ಆನ್ ಲೈನ್ ಕಚೇರಿ ಉದ್ಘಾಟನೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆಯಿತು .
ವಿತರಣೆ ಉದ್ಘಾಟನೆಯನ್ನು ಕೇರಳ ಕಂದಾಯ ಹಾಗೂ ವಸತಿ ಸಚಿವ ಕೆ . ರಾಜನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ರಾಜ್ಯದ ಎಲ್ಲಾ ಭೂರಹಿತರಿಗೆ ಭೂಮಿ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸಚಿವರು ಹೇಳಿದರು . ಇಂದು ಭೂಸುಧಾರಣಾ ಕಾಯ್ದೆ ಜಾರಿಗೊಂದು 50 ವರ್ಷವಾದರೂ ಕೇರಳದಲ್ಲಿ ಇನ್ನೂ ಹಲವಾರು ಮಂದಿ ಭೂರಹಿತರಿದ್ದಾರೆ.
ಸರಕಾರ ಎಲ್ಲರಿಗೂ ಭೂಮಿ ನೀಡುವ ಉದ್ದೇಶ ಹೊಂದಿದ್ದು , ಈಗ ಸರಕಾರದ ಬಳಿ ಇರುವ ಭೂಮಿ ಸಾಲದು ಇದರಿಂದ ಅತಿಕ್ರಮ ಗೊಳಿಸಿರುವ ಎಲ್ಲಾ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಕಾಸರಗೋಡು ಶಾಸಕ ಎನ್ .ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ . ಕೆ . ಎಂ ಅಶ್ರಫ್ , ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ, ಸದಸ್ಯೆ ಪಿ.ಖದೀಜಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ವಿ.ರಾಜನ್, ಕುರಿಯಾಕೋಸ್ ಪ್ಲಾಪ್ಪರಂಬಿಲ್, ಮುಹಮ್ಮದ್ ಕುಂಞಿ ಕುಟ್ಟಿಯಾನಂ, ಸನ್ನಿ ಅರಮನೆ, ಮೂಸಾ ಬಿ ಚೆರ್ಕಳ ಮಾತನಾಡಿದರು. ಉಪ ಜಿಲ್ಲಾಧಿಕಾರಿ ಡಿಆರ್ ಮೇಘಶ್ರೀ ಸ್ವಾಗತಿಸಿ, ಕಾಸರಗೋಡು ಆರ್ ಡಿಒ ಅತುಲ್ ಎಸ್ ನಾಥ್ ವಂದಿಸಿದರು.