ಕಾಸರಗೋಡು: ಜಿಲ್ಲೆಯಲ್ಲಿ ಕಾಳಸಂತೆ ಹಾಗೂ ಅಕ್ರಮ ದಾಸ್ತಾನು ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ತಿಳಿಸಿದ್ದಾರೆ. ಗುರುವಾರ ನಡೆದ ಸಂಬಂಧ ಪಟ್ಟ ಇಲಾಖಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಲೆ ಏರಿಕೆ ತಡೆಗಟ್ಟಲು ತಪಾಸಣೆಗೆ ನಿಗಾ ಇರಿಸಲಾಗುವುದು.
ರಖಂ ವರ್ತಕರು ಜಯ ಅಕ್ಕಿಯನ್ನು ದಾಸ್ತಾನಿಡುತ್ತಿದ್ದಾರೆ ಎಂಬ ದೂರು ರಾಜ್ಯಮಟ್ಟದಲ್ಲೇ ಕೇಳಿಬರುತ್ತಿದ್ದು , ಈ ಹಿನ್ನಲೆಯಲ್ಲಿ ತಪಾಸಣೆ ನಡೆಸಲು ವಿಶೇಷ ತಂಡ ರಚಿಸಲು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ ಕೆ . ಎನ್ ಬಿಂದು ರವರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.
ನಾಗರಿಕ ಪೂರೈಕೆ , ಪೊಲೀಸ್ , ಲೀಗಲ್ ಮೆಟ್ರೋಲಜಿ ಇಲಾಖೆಯ ಅಧಿಕಾರಿಗಳು ವಿವಿಧ ಕೇಂದ್ರಗಳಲ್ಲಿ ತಪಾಸಣೆ ನಡೆಸುವರು. ಆಹಾರಸಾಮಗ್ರಿಗಳಿಗೆ ದುಬಾರಿ ಬೆಲೆ ವಸೂಲು ಮಾಡುವುದು ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುನ್ನೆಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎ . ಕೆ ರಮೇ೦ದ್ರನ್ , ತಹಶೀಲ್ದಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.