ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು. ಬಿಜೆಪಿ ಗೆಲ್ಲಬಹುದಾ ಸಂಭಾವ್ಯ ಪಕ್ಷೇತರ ಶಾಸಕರ ಪಟ್ಟಿ ಸಿದ್ದಪಡಿಸಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೆಲವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಸ್ಥಳಿಯ ನಾಯಕರಿಗೂ ಪಕ್ಷೇತರರ ಜೊತೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.
ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿರುವ ಅಖಂಡ ಶ್ರೀನಿವಾಸ ಮೂರ್ತಿ, ಕುಂದಗೋಳದ ಚಿಕ್ಕನಗೌಡರ್, ಚನ್ನಗಿರಿಯಲ್ಲಿ ಚುನಾವಣೆಗೆ ಇಳಿದ ಮಾಡಾಳ್ ಮಲ್ಲಿಕಾರ್ಜುನ್ ಇತ್ಯಾದಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ.
ಲಖನ್ ಹೇಳಿಕೆ: ವಿಧಾನ ಸಭೆ ಚುನಾವಣೆ ಪೂರ್ಣಗೊಂಡು ಮತ ಫಲಿತಾಂಶ ಹೊರಬೀಳುವ ಮೊದಲೇ ಪಕ್ಷಾಂತರ ರಾಜಕೀಯದ ಮಾತು ಗರಿಗೆದರಿದೆ. ರಾಜ್ಯದಲ್ಲಿ 120 ಸ್ಥಾನ ಬಿಜೆಪಿಗೆ ದೊರೆಯಲಿದೆ. ಈಗ ನಾವೇ ಸರ್ಕಾರ ರಚಿಸುತ್ತೇವೆ ಎಂದು ಸೂಟು ಬೂಟು ಸಿದ್ಧಪಡಿಸಿಕೊಂಡಿರುವ ಕಾಂಗ್ರೆಸ್ ನಾಯಕರು 85 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಲಿದೆ. ಇದರಿಂದಾಗಿ ಇಪ್ಪತ್ತು ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷೇತರ ಎಂಎಲ್ಸಿ ಲಖನ್ ಜಾರಕಿಹೊಳಿ ಹೇಳಿದ್ದಾರೆ. ಅಧಿಕಾರ ದೊರೆಯದ ಕಾರಣ ಅವರು ರಾಜೀನಾಮೆ ಕೊಟ್ಟು ಅಧಿಕಾರ ಇರುವವರ ಜತೆ ಬರುತ್ತಾರೆ ಎಂದು ಹೇಳಿದ್ದಾರೆ.