ಪುತ್ತೂರು: ಹಣಹಂಚಿಕೆ, ಅಪಪ್ರಚಾರದಿಂದಾಗಿ ಸಣ್ಣ ಅಂತರದಿಂದ ಸೋಲನ್ನಪ್ಪಿದ್ದೇನೆ ಎಂದು ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಸೇವಾ ಸಮರ್ಪಣಾ ಕಾರ್ಯಕ್ರಮದ ಮೂಲಕ ಕಾರ್ಯಕರ್ತರಿಗೆ ವಂದನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೂ ಸಮಾಜ ಶಕ್ತಿಯಾಗಬೇಕು ಎಂಬುವ ಆಶಯವಿತ್ತು. ಕೆಲ ನಾಯಕರ ತಪ್ಪು ಹೆಜ್ಜೆಗಳಿಂದಾಗಿ ಅಂತಹ ಅವಕಾಶ ತಪ್ಪಿ ಹೋಯಿತು. ಮೇಲಿನ ಸ್ಥಾನದಲ್ಲಿ ಕುಳಿತಿದ್ದ ನಾಯಕರ ತಪ್ಪು ನಿರ್ಧಾರದಿಂದಾಗಿ ಹಿಂದೂ ಸಮಾಜಕ್ಕೆ ಶಕ್ತಿ ಕೊಡಬೇಕಾದ ನಾವು ಶಕ್ತಿ ಕಳೆದುಕೊಂಡೆವು. ನನ್ನಲ್ಲಿ ಎಂದೂ ಜಾತಿ ಇಲ್ಲ. ಇರುವುದು ಹಿಂದುತ್ವ ಮಾತ್ರ. ಆದರೂ ನನ್ನ ಬಗ್ಗೆ ಹಲವಾರು ಅಪಮಾನ, ಅಪವಾದಗಳನ್ನು ಮಾಡಿದರು. ಅವರಿಗೆ ನನ್ನ ಕಣ್ಣೀರಿನ ಹನಿ ತಟ್ಟಲಿದೆ. ಶ್ರೀ ಮಹಾಲಿಂಗೇಶ್ವರ ಉತ್ತರ ನೀಡಲಿದ್ದಾನೆ. ಚುನಾವಣೆಯಲ್ಲಿ ನಾನು ಸೋತ್ತಿದ್ದರೂ ಕಾರ್ಯಕರ್ತರ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ. ಸ್ಪರ್ಧೆಯ ಮೂಲಕ ದೇಶಕ್ಕೆ ಬದಲಾವಣೆಯ ಚಿಂತನೆ ನೀಡಿದ್ದೇನೆ ಎಂದು ಹೇಳಿದರು. ಪುತ್ತಿಲ ತನ್ನನ್ನು ಬೆಂಬಲಿಸಿದ್ದ ಬಲಿಸಿದ್ದ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ವಿಶೇಷ ಪಾದಯಾತ್ರೆ ಹಮ್ಮಿಕೊಂಡಿದ್ದರು. ಪಾದಯಾತ್ರೆಯಲ್ಲಿ ಭಾಗವಹಿಸಿದ ಸುಮಾರು ೫೦೦೦ ಕಾರ್ಯಕರ್ತರು ಪಾಲ್ಗೊಂಡಿದ್ದರು.