ಉಡುಪಿ: ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಹಿನ್ನೆಲೆ, ಮೈತ್ರಿ ಸರ್ಕಾರದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರ ನಡೆಸಲು ಸಿಎಂ ಕುಮಾರಸ್ವಾಮಿ ನಾಳೆ ಬೈಂದೂರಿಗೆ ಆಗಮಿಸಲಿದ್ದಾರೆ.
ಮಂಗಳವಾರ ಬೆಳಿಗ್ಗೆ ಬೈಂದೂರು ಸಮೀಪದ ಅರೆಶಿರೂರು ಹೆಲಿಪ್ಯಾಡ್ ಗೆ ಆಗಮಿಸುವ ಅವರು ಪಕ್ಷದ ವತಿಯಿಂದ ಆಯೋಜಿಸುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದು, ಬಳಿಕ ಭದ್ರಾವತಿಗೆ ತೆರಳಲಿದ್ದಾರೆ.
ಒಂದೆಡೆ ಸಿಎಂ ಪ್ರಚಾರ ಸಭೆಗೆ ಆಗಮಿಸುವ ತವಕದಲ್ಲಿ ಕಾರ್ಯಕರ್ತರಿದ್ದು, ಇನ್ನೊಂದೆಡೆ ಸಿಎಂ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಮರಳು ಸಮಸ್ಯೆ ಬಗ್ಗೆ ಅಹೋರಾತ್ರಿ ಧರಣೆ ನಡೆಯುತ್ತಿದ್ದು, ಪ್ರತಿಭಟನಾಕಾರರು ಸಿಎಂ ಬರುವಿಕೆಗೆ ಒತ್ತಾಯಿಸಿದ್ದಾರೆ. ಪ್ರಚಾರ ಸಭೆಗೆ ಆಗಮಿಸುವ ಸಿಎಂ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಆಗ್ರಹಿಸಿದ್ದಾರೆ.