ಪುತ್ತೂರು: ಹಣ ಕಟ್ಟಿಕೊಂಡು ಉಳಾಯಿ ಪಿದಾಯಿ ಎಂಬ ಇಸ್ಪೀಟು ಆಟವನ್ನು ಬಲ್ನಾಡು ಗ್ರಾಮದ ಸಾರ್ಯ ರಕ್ಷಿತಾರಣ್ಯದೊಳಗೆ ಆಡುತ್ತಿದ್ದ ವೇಳೆ ಪುತ್ತೂರು ಸಂಪ್ಯ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಬಲ್ನಾಡು ಗ್ರಾಮದ ಸಾರ್ಯ ರಕ್ಷಿತಾರಣ್ಯದಲ್ಲಿ ಹಣ ಕಟ್ಟಿಕೊಂಡು ಉಳಾಯಿ ಪಿದಾಯಿ ಎಂಬ ಇಸ್ಪೀಟು ಆಟ ಆಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಎಸ್ಪಿ ಲಕ್ಷ್ಮೀಕಾಂತ್ ಅವರ ನಿರ್ದೇಶನದಂತೆ, ಡಿವೈಎಸ್ಪಿ ಮುರಳಿಧರ್ ಪಿ.ಕೆಯವರ ಮಾರ್ಗದರ್ಶನದಂತೆ ಸಂಪ್ಯ ಎಸ್.ಐ ಸಕ್ತಿವೇಲು ಅವರ ನೇತೃತ್ವದಲ್ಲಿ ದಾಳಿ ಮಾ.4ರಂದು ಸಂಜೆ ದಾಳಿ ನಡೆಸಲಾಗಿತ್ತು.
ಈ ಸಂದರ್ಭ ಆಟದಲ್ಲಿ ನಿರತರಾಗಿದ್ದ ಬಲ್ನಾಡು ಪಾಣೆತ್ತಡ್ಕ ಅಬೂಬಕ್ಕರ್ ಎಂಬವರ ಪುತ್ರ ಮಹಮ್ಮದ್ ಇಕ್ಬಾಲ್(30ವ), ಪಳ್ಳಿತ್ತಡ್ಕ ಮೊಯಿದು ಕುಂಞ ಎಂಬವರ ಪುತ್ರ ಅಬ್ದುಲ್ ಕುಂಞ (42ವ), ಪನೆತ್ತಡ್ಕ ನಿವಾಸಿ ಮಹಮ್ಮದ್ ನಿಯಾಜ್ ಎಂಬವರು ಬಂಧಿಸಲಾಗಿದೆ. ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತರಿಂದ ಅಟಕ್ಕೆ ಬಳಸಿದ ಇಸ್ಪಿಟ್, ರೂ. 5,300 ನಗದು ಮತ್ತು ಒಂದು ಆಟೋ ರಿಕ್ಷಾವನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.