ಬಂಟ್ವಾಳ: ಸರ್ಕಾರಿ ಕಚೇರಿ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ಸುಣ್ಣಬಣ್ಣ ಕಾಣದ ಗೋಡೆಗಳು, ಬಲೆ ಹಿಡಿದಿರುವ ಛಾವಣಿ, ಧೂಳು ಹತ್ತಿರುವ ಕಡತಗಳು.. ಆದರೆ ಇದಕ್ಕೆಲ್ಲಾ ವ್ಯತಿರಿಕ್ತ ಎಂಬಂತೆ ಹೊಸ ರೂಪ ಪಡೆದುಕೊಂಡು ಮೇಳೈಸುತಿದೆ ಬಿ.ಸಿ.ರೋಡು ಸಮೀಪದ ಗೂಡಿನ ಬಳಿ ಎಂಬಲ್ಲಿರುವ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಛೇರಿ.ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರ.. ಚಿತ್ರಗಳಲ್ಲಿ ಸರ್ಕಾರಿ ಯೋಜನೆಗಳ ಮಾಹಿತಿಯ ಮಹಾಪೂರ.. ಜೊತೆಗೆ ತುಳುನಾಡ ಸಂಸ್ಕೃತಿಯ ಝೇಂಕಾರ.. ಇದು ಈ ಕಛೇರಿಗೆ ಹೊಸ ಮೆರುಗು ತಂದು ಕೊಟ್ಟಿರುವ ವರ್ಲೀ ಮೋಡಿ..!
ಹೌದು ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ, ಕ್ಷೇತ್ರ ಶಿಕ್ಪ್ಷಣಾಧಿಕಾರಿಗಳ ಕಛೇರಿಯಂತೆ ದಾನಿಗಳ ನೆರವಿನೊಂದಿಗೆ ನವೀಕೃತಗೊಳ್ಳುತ್ತಿದೆ. ಎಲ್ಲಾ ಸರ್ಕಾರಿ ಕಚೇರಿಗಳಂತೆ ಅದೇ ಮಾಮುಲು ಹಳದಿ ಬಣ್ಣದ ಬದಲು ಬಣ್ಣದ ಬಣ್ಣದ ವರ್ಲಿ ಚಿತ್ರಗಳು ಗೋಡೆಯ ಮೇಲೆ ಪಡಿಮೂಡಿದೆ. ಇದು ಬರಿಯ ಚಿತ್ರಗಳಾಗಿರದೇ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲಾ ಯೋಜನೆಗಳ ಮಾಹಿತಿಯನ್ನು ನೀಡುತ್ತದೆ. ಕಚೇರಿಯ ಒಳ ಭಾಗದ ಗೋಡೆ, ಸಭಾಂಗಣ, ಹೊರಾಂಗಣ ಮಾತ್ರವಲ್ಲದೆ ಆವರಣಗೋಡೆಗಳಲ್ಲೂ ವರ್ಲಿ ಚಿತ್ರಗಳು ರಾರಾಜಿಸುತ್ತಿದೆ. ನಲಿಕಲಿ, ಅಕ್ಷರದಾಸೋಹ, ಕ್ಷೀರಭಾಗ್ಯ ಮೊದಲಾದ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲಾ ಯೋಜನೆಗಳ ಮಾಹಿತಿಯನ್ನು ಈ ಚಿತ್ರಗಳು ನೀಡುತ್ತವೆ. ಚಿತ್ರಕಲಾ ಶಿಕ್ಷಕರಾದ ತಾರಾನಾಥ ಕೈರಂಗಳ ಮತ್ತವರ ಬಳಗ ರೇಖೆಗಳನ್ನು ಚಿತ್ತಾರವಾಗಿ ರೂಪಿಸಿದ್ದಾರೆ.
ಆಹ್ಲಾದಕರ ವಾತವರಣ:
ಸರ್ಕಾರಿ ಕಚೇರಿಗಳಲ್ಲಿ ದುಡಿಯುವ ಸಿಬ್ಬಂದಿಗಳು ಪ್ರತಿ ಗಳಿಗೆ ಒಂದಲ್ಲ ಒಂದು ಒತ್ತಡದಲ್ಲಿ ಕೆಲಸ ನಿರ್ವಹಿಸ ಬೇಕಾದ ಅನಿವಾರ್ಯತೆ ಇದೆ. ಕೆಲವೊಮ್ಮೆ ಯಾಕಾದರೂ ಕಚೇರಿಗೆ ಬರುತ್ತೇನೆ ಎನ್ನುವ ಮನೋಭಾವವೂ ಸಿಬ್ಬಂದಿಗಳನ್ನು ಕಾಡುತ್ತಿರುತ್ತದೆ. ಆದರೆ ಬಣ್ಣ ಬಣ್ಣದ ಚಿತ್ರಗಳ ಗೋಡೆಗಳಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಚೇರಿಯ ಸಿಬ್ಬಂದಿಗಳಲ್ಲಿ ಈಗ ಆಹ್ಲಾದತೆ ಮೂಡಿದೆ. ಏನೇ ಒತ್ತಡ ಇದ್ದರೂ ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ಕಂಡಾಗ ಮನಸ್ಸು ಹಗುರವಾಗುತ್ತದೆ, ಮತ್ತೆ ಕೆಲಸ ಮಾಡಬೇಕೆನ್ನುವ ಚೈತನ್ಯ ಮೂಡುತ್ತದೆ ಎನ್ನುವುದು ಇಲ್ಲಿನ ಸಿಬ್ಬಂದಿಗಳು ಕಂಡು ಕೊಂಡ ಸತ್ಯ. ಕಚೇರಿಯ ಆವರಣ ಪ್ರವೇಶಿಸುವಾಗಲೇ ಕೆಲಸ ಮಾಡಬೇಕಲ್ಲಾ ಎನ್ನುವ ಉದಾಸೀನ ಮನೋಭಾವ ದೂರವಾಗಿ ಮನೆಯ ಪರಿಸರದಂತೆ ಆತ್ಮೀಯ ವಾತಾವರಣವನ್ನು ವರ್ಲಿ ಚಿತ್ರಗಳು ನೀಡಿದೆ.
ಮಾದರಿ ಕಚೇರಿ:
ಈ ಹಿಂದೆ ಎಲ್ಲಾ ಸರ್ಕಾರಿ ಕಚೇರಿಗಳಂತೆ ಸಾಮಾನ್ಯವಾಗಿದ್ದ ಕ್ಷೇತ್ರ ಸಂಪನ್ಮೂಲ ಕೇಂದ್ರ ಈಗ ಮಾದರಿ ಕಚೇರಿಯಾಗಿ ರೂಪುಗೊಳ್ಳುತ್ತಿದೆ. ದಾನಿಗಳ ನೆರವು ಪಡೆದುಕೊಂಡು ನವೀಕೃತಗೊಳಿಸಲಾಗುತ್ತಿದೆ. ಕೆಂಪು ಬಣ್ಣದ ಸಾಮಾನ್ಯವಾಗಿದ್ದ ನೆಲ ಟೈಲ್ಸ್ ನೆಲವಾಗಿ ಮಾರ್ಪಟ್ಟಿದೆ. ಗೋಡೆಗಳಲ್ಲಿ ಚಿತ್ರ, ಮಾಹಿತಿಗಳು ಗಮನ ಸೆಳೆಯುತ್ತಿವೆ. ಕಚೇರಿಗೆ ಭೇಟಿ ನೀಡುವ ಶಿಕ್ಷಕರು ಹಾಗೂ ಸಾರ್ವಜನಿಕರು ಕೂಡ ಇದರಿಂದ ಪ್ರಭಾವಿತಗೊಂಡಿದ್ದಾರೆ. ಇದು ಇಲ್ಲಿನ ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜೇಶ್ ಅವರ ಪರಿಕಲ್ಪನೆ. ಚಿತ್ರಕಲಾ ಶಿಕ್ಷಕರಾದ ತಾರಾನಾಥ ಕೈರಂಗಳ, ಧನಂಜಯ ಪುಂಜಾಲಕಟ್ಟೆ, ಉಮೇಶ್ ಬೊಳಂತೊ, ಮೊಗರು ಮುಖೇಶ್ ಸುಳ್ಯ, ಪದ್ಮನಾಭ ಬೆಳ್ಳಾರೆ, ಸೂಮದರ ತೋಡಾರ್, ರಂಜಿತ್ ಕಡೇಶಿವಾಲಯ, ಬಾಲಕೃಷ್ಣ ಶೆಟ್ಟಿ ಖಚಿಡಿಗ, ಅನುಷಾ ಕಿರಣ್ ದಾಸ್ ಶೆಟ್ಟಿ ಯವರು ವಲರ್ಿ ಚಿತ್ತಾರದ ಮೂಲಕ ರಾಜೇಶ್ ಅವರ ಪರಿಕಲ್ಪನೆಗೆ ಮೂರ್ತ ರೂಪ ನೀಡಿದ್ದಾರೆ. ಕ್ಷೇತ್ರ ಶಿಕ್ಪ್ಷಣಾಧಿಕಾರಿ ಶೇಷಶಯನ ಹಾಗೂ ಇಲಾಖೆಯ ಅಧಿಕಾರಿ ವರ್ಗ ಕೂಡ ಬೆಂಬಲವಾಗಿ ನಿಂತಿದ್ದಾರೆ.