ಕಾರವಾರ: ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರ ಕುರಿತು ವ್ಯಾಪಕ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಚಿವರ ಆಪ್ತ ಸಹಾಯಕ ಸುರೇಶ ಶೆಟ್ಟಿ ಅವರು ಶಿರಸಿಯ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುರೇಶ ಶೆಟ್ಟಿ ಪೋಲಿಸ್ ಠಾಣೆಯಲ್ಲಿ ದಾಖಲಿಸಿದ ತಮ್ಮ ದೂರಿನಲ್ಲಿ ‘ಪ್ರಜಾಕೀಯ ಎಂಬ ಹೆಸರಿನ ಫೇಸ್ಬುಕ್ ಖಾತೆಯಿಂದ ಬಿಜೆಪಿ ಅಧಿಕಾರಕ್ಕೆ ಬಂದರೆ ಕೆಂಪೇಗೌಡ ಪ್ರತಿಮೆಯನ್ನು ಉರುಳಿಸಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸುತ್ತೇವೆ ಎಂದು ಅನಂತಕುಮಾರ ಹೆಗಡೆ ಹೇಳಿಕೆ ನೀಡಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ.
ಹಾಗೂ ಈ ಪೋಸ್ಟ್ಗಳನ್ನು ಇತರರಿಗೂ ಸಹ ಕಳುಹಿಸಲಾಗಿದೆ. ಈ ರೀತಿಯ ಅಪಪ್ರಚಾರದಿಂದ ಕೇಂದ್ರ ಸಚಿವರ ಬಗ್ಗೆ ಕನ್ನಡಿಗರಿಗೆ ದ್ವೇಷ ಹುಟ್ಟಿಸಿ, ಸಮಾಜದಲ್ಲಿ ಶಾಂತಿಭಂಗಮಾಡುವ ದುರುದ್ದೇಶದಿಂದ ಈ ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ ಎಂದು ದೂರಿದ್ದಾರೆ. ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ನಾಡಪ್ರಭು ಕೆಂಪೇಗೌಡರ ಬಗ್ಗೆ ಎಲ್ಲಿಯೂ ಈ ರೀತಿಯ ಹೇಳಿಕೆಯನ್ನು ನೀಡಿಲ್ಲ. ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಸಂದೇಶಗಳನ್ನು ಹರಿಯಬಿಟ್ಟಿರುವವರ ಹಿಂದೆ ಕಾಣದ ಕೈಗಳು ಕೆಲಸಮಾಡಿದೆ ಎಂದು ಸುರೇಶ ಶೆಟ್ಟಿ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.
ಇದಲ್ಲದೆ ಮಂಜು ಪವರ್ ಸ್ಟಾರ್ ಎಂಬಾತನು ಈ ಫೋಸ್ಟ್ಗೆ ‘ಅನಂತಕುಮಾರ ಹೆಗಡೆ ಬೆಂಗಳೂರಿಗೆ ಬರುವಂತಿಲ್ಲ ಎಂದು ಬೆದರಿಕೆಯ ಕಮೆಂಟ್ ಹಾಕಿದ್ದಾನೆ. ನರೇಂದ್ರ ಯಾದವ್ ತಿಮ್ಮನಹಳ್ಳಿ ಎಂಬ ಫೇಸ್ಬುಕ್ ಖಾತೆಯಿಂದ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರನ್ನುದ್ದೇಶಿಸಿ ನಿನಗೆ ತಾಕತ್ತು ಇದ್ದರೆ ಕೆಂಪೇಗೌಡರ ಪ್ರತಿಮೆ ಟಚ್ ಮಾಡೋ ನೋಡೋಣ ಎಂದು ಬೆದರಿಕೆ ಹಾಕಲಾಗಿದೆ ಎಂದು ಶೆಟ್ಟಿ ದೂರಿದ್ದಾರೆ.
ಚುನಾವಣೆಯ ಈ ಸಂದರ್ಭದಲ್ಲಿ ಈ ರೀತಿಯ ಆಕ್ಷೇಪಾರ್ಹ ಸಂದೇಶಗಳನ್ನು ಹರಿಯಬಿಟ್ಟಿರುವುದು ಸಮಾಜದಲ್ಲಿ ಗೊಂದಲ ನಿರ್ಮಿಸಿ ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡ ಭಾವನೆಯನ್ನು ಕೆರಳಿಸಿ, ಜಾತಿ ಗಲಭೆಗಳನ್ನು ಸೃಷ್ಟಿಸಲು ಪಿತೂರಿ ಮಾಡುತ್ತಿರುವುದು ಸ್ಪಷ್ಟ. ಅಲ್ಲದೇ ಕೇಂದ್ರ ಸಚಿವರ ಹೆಸರನ್ನು ತೇಜೋವದೆ ಮಾಡುವ ದುರುದ್ದೇಶದಿಂದ ಈ ಸುಳ್ಳು ಸಂದೇಶಗಳನ್ನು ಹಾಕಲಾಗಿದೆ. ಆದ್ದರಿಂದ ಸುಳ್ಳು ಸಂದೇಶ ಹರಡುತ್ತಿರುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುರೇಶ ಶೆಟ್ಟಿ ತಮ್ಮ ದೂರಿನಲ್ಲಿ ವಿನಂತಿಸಿದ್ದಾರೆ.