News Karnataka Kannada
Sunday, April 28 2024
ಕರಾವಳಿ

ವನಭೋಜನ: ತೋಡಿನಲ್ಲಿ ಹರಿಯಬೇಕಾದ ಮಳೆ ನೀರು ರೋಡಿನಲ್ಲಿ..!

Photo Credit :

ವನಭೋಜನ: ತೋಡಿನಲ್ಲಿ ಹರಿಯಬೇಕಾದ ಮಳೆ ನೀರು ರೋಡಿನಲ್ಲಿ..!

ಮೂಡುಬಿದಿರೆ : ತಾಲೂಕಿನ ಇರುವೈಲು ಗ್ರಾ.ಪಂ ವ್ಯಾಪ್ತಿಯ ತೋಡಾರು ಗ್ರಾಮದ ಮಾಸ್ತಿಕಟ್ಟೆ ನೇರಳಕಟ್ಟೆಯಿಂದ ವನಭೋಜನಕ್ಕಾಗಿ ಬೆರ್ಮರೆಕೋಡಿಗೆ ಹೋಗುವ ರಸ್ತೆ ಕಳೆದ ಹಲವು ವರ್ಷಗಳಿಂದ ನಾದುರಸ್ತಿಯಲ್ಲಿದ್ದು, ವಾಹನಗಳು ಮಾತ್ರವಲ್ಲದೆ ಗ್ರಾಮಸ್ಥರು ನಡೆದುಕೊಂಡು ಹೋಗುವುದು ಕಷ್ಟಕರವಾಗಿದೆ. ಬೇಸಿಗೆಯಲ್ಲಿ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾದರೇ, ಮಳೆ ಬಂದಾಗ ತೋಡಿನಲ್ಲಿ ಹರಿಯಬೇಕಾದ ಮಳೆಯ ನೀರು ರಸ್ತೆಯಲ್ಲಿ ಹರಿದುಕೊಂಡು ಹೋಗುವುದರಿಂದ ರಸ್ತೆ ತೋಡಾಗಿ ಪರಿವರ್ತನೆಗೊಳ್ಳುತ್ತದೆ.

ದಾಖಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರದೇಶಕ್ಕೆ ಹೋಗುವ ರಸ್ತೆ ಎಂದಿದ್ದರೂ, ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ರಸ್ತೆಗೆ ಕಾಯಕಲ್ಪವಾಗಿಲ್ಲ. ರಸ್ತೆ ತೀವ್ರ ತರಹ ಹದೆಗಟ್ಟರುವುದರಿಂದ ವಾಹನ ಸಂಚಾರವಿಲ್ಲ. ಆಟೋ ಚಾಲಕರು ಕೂಡ ಈ ರಸ್ತೆಗೆ ಬರಲು ಒಪ್ಪುವುದಿಲ್ಲ. ಶಾಲೆಯ ಮಕ್ಕಳು ಈ ರಸ್ತೆಯಲ್ಲಿ ಸೈಕಲ್‍ಗಳನ್ನು ತಳ್ಳಿಕೊಂಡೇ ಸಾಗಬೇಕಾಗುತ್ತದೆ. ಗ್ಯಾಸ್ ಸರಬರಾಜು ಕೂಡ ಕಷ್ಟವಾಗಿದ್ದು, ಇಲ್ಲಿನ ನಿವಾಸಿಗಳು ಗ್ಯಾಸ್ ಸಿಲಿಂಡರ್ ಗಳನ್ನು ಹೊತ್ತುಕೊಂಡು ಬರಬೇಕಾಗುತ್ತದೆ. ಮಳೆಗಾಲದಲ್ಲಿ ರಸ್ತೆ ತೋಡಾಗುವುದರಿಂದ ವಿಷ ಜಂತುಗಳು ಕೂಡ ಗೋಚರವಾಗುವುದಿಲ್ಲ. ಜನಪ್ರತಿನಿಧಿಗಳಿಗೆ ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ, ಮಾಸ್ತಿಕಟ್ಟೆ ವನಭೋಜನ ರಸ್ತೆ ಸೂಕ್ತ ರೀತಿಯಲ್ಲಿಅಭಿವೃದ್ಧಿಯನ್ನು ಕಂಡಿಲ್ಲ. ಅರೆಬರೆ ಕಾಮಗಾರಿಯಿಂದಾಗಿ ಗ್ರಾಮಸ್ಥರು  ತೊಂದರೆ ಅನುಭವಿಸುವಂತಾಗಿದೆ.

ಚುನಾವಣೆ ಬಹಿಷ್ಕರಿಸಿದ್ದ ಗ್ರಾಮಸ್ಥರು

ಕೆಲವು ವರ್ಷಗಳ ಹಿಂದೆ ಈ ರಸ್ತೆ ನಿರ್ಮಾಣಕ್ಕೆ, ಅಂದಿನ ಮಂಡಲ ಅಧ್ಯಕ್ಷ ದಿ.ರೇಮಂಡ್ ಡಿಕೋಸ್ತ ಅವರು ತಮ್ಮ ಜಮೀನಿನ ಮಧ್ಯೆ ರಸ್ತೆ ನಿರ್ಮಿಸಲು ಜಾಗ ನೀಡಿರುವುದರಿಂದ ಇಲ್ಲಿನ ನಿವಾಸಿಗಳು ಸ್ಮರಿಸಿಕೊಳ್ಳುತ್ತಾರೆ. ಆದರೆ ಐವತ್ತು ವರ್ಷಗಳಿಂದ ಈಚೆಗೆ ರಸ್ತೆಗೆ ಡಾಮರು ಅಳವಡಿಕೆಯಾಗಲಿ, ದುರಸ್ತಿಯಾಗಲಿ ಆಗಿಲ್ಲ. ಈ ಕಾರಣದಿಂದಾಗಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದರು. ಜನಪ್ರತಿನಿಧಿಗಳು ಭರವಸೆ ನೀಡಿದ ಕಾರಣದಿಂದ ಗ್ರಾಮಸ್ಥರು ಬಹಿಷ್ಕಾರವನ್ನು ಹಿಂಪಡೆದಿದ್ದರು.

ಉಮಾನಾಥ ಕೋಟ್ಯಾನ್ ಶಾಸಕರಾದ ಬಳಿಕ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, 2018-19ನೇ ಸಾಲಿನ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತ ಅಭಿವೃದ್ಧಿ ಯೋಜನೆಯಡಿ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ವನಭೋಜನ ಪ್ರದೇಶದಲ್ಲಿ 371 ಮೀಟರ್ ಕಾಂಕ್ರೀಟು ರಸ್ತೆ ನಿರ್ಮಾಣವಾಗಿದೆ.  ನೇರಳಕಟ್ಟೆಯಿಂದ ವನಭೋಜನಕ್ಕೆ ಹೋಗುವ ಅರ್ಧ ಕಿ.ಮೀನಷ್ಟು ರಸ್ತೆ ಸಂಪೂರ್ಣವಾಗಿ ನಾದುರಸ್ತಿಯಲ್ಲಿದೆ. ಅರ್ಧ ಕಿ.ಮೀ ನಾದುರಸ್ತಿಯಲ್ಲಿರುವ ರಸ್ತೆಯನ್ನು ಬಿಟ್ಟು ಬೆರ್ಮರೆಕೋಡಿ ರಸ್ತೆಗೆ ಅಲ್ಪ ಪ್ರಮಾಣದಲ್ಲಿ ಕಾಂಕ್ರೀಟು ಅಳವಡಿಸಲಾಗಿದೆ.

ನೇರಳಕಟ್ಟೆ-ವನಭೋಜನ ರಸ್ತೆ ದುರಸ್ತಿಯ ಬಗ್ಗೆ ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದು, ಅರ್ಧದಷ್ಟು ರಸ್ತೆ ಮಾತ್ರ ದುರಸ್ತಿಯಾಗಿದೆ. ಆದರೆ ಉಳಿದ ಅರ್ಧರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ನಾವು ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಶಾಸಕರು ಅಥವಾ ಪಂಚಾಯತ್‍ನವರು ಇದಕ್ಕೆ ಅನುದಾನವನ್ನು ಮೀಸಲಿರಿಸಿ ರಸ್ತೆ ದುರಸ್ತಿ ಮಾಡಿದರೆ, ಸಮಸ್ಯೆ ದೂರವಾಗಿ ಎಲ್ಲರಿಗೂ ಅನುಕೂಲವಾಗುತ್ತದೆ.

ಸದಾನಂದ ನಾರಾವಿ, ಗ್ರಾಮಸ್ಥರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
193
Deevith S K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು