ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಮಾವಳ್ಳಿ ಕ್ರಾಸ್ ಬಳಿ ಎದುರು ಬರುತ್ತಿದ್ದ ಲಾರಿಗೆ ಸುಜುಕಿ ಅಲ್ಟೊ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ವಿನಾಯಕ ಹೆಗಡೆ (೩೫), ಅರ್ಚನಾ ಹೆಗಡೆ (೩೩) ಹಾಗೂ ಒಂದೂವರೆ ವರ್ಷದ ಬಾಲಕಿ ಶ್ರಾವಣಿ ಹೆಗಡೆ ಮೃತಪಟ್ಟವರು. ಕಾರಿನಲ್ಲಿದ್ದ ನಾಲ್ಕೂವರೆ ವರ್ಷದ ಬಾಲಕಿ ಯಶಸ್ವಿನಿ ಹೆಗಡೆ ಅಪಾಯದಿಂದ ಪಾರಾಗಿದ್ದಾಳೆ.
ಮೂಲತಃ ಶಿರಸಿಯ ಸೋಂದಾದ ಅರಗಿನಮನೆಯವರಾಗಿರುವ ವಿನಾಯಕ ಹೆಗಡೆಯವರು ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದು, ಸದ್ಯ ಬೆಳಗಾವಿಗೆ ವರ್ಗಾವಣೆ ಹೊಂದಿದ್ದಾರೆ. ತಮ್ಮ ಊರಿಗೆ ಬಂದಿದ್ದ ಅವರು ಮಗಳನ್ನು ಶಾಲೆಗೆ ದಾಖಲಾತಿ ಮಾಡಲೆಂದು ಬೆಳಗಾವಿಗೆ ಪುನಃ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ.
ಲಾರಿಯು ಹುಬ್ಬಳ್ಳಿಯಿಂದ ಕುಮಟಾ ಕಡೆ ಬರುತ್ತಿತ್ತು ಎನ್ನಲಾಗಿದೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.