ಮೂಡುಬಿದಿರೆ: ಇಪ್ಪತ್ತರ ಸಂಭ್ರಮದಲ್ಲಿರುವ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಟನೆ ಪ್ರೆಸ್ ಕ್ಲಬ್(ರಿ) ವತಿಯಿಂದ ಗೋವರ್ಧನಂ ಸಂಭ್ರಮ ಗೀತಾಜಯಂತಿಯ ಸುದಿನ ರವಿವಾರ ಸಂಜೆ ಎಂಸಿಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಜರಗಿತು.
ಗೋಧೂಳಿ ಸಮಯದಲ್ಲಿ ಮಾಜಿ ಸಚಿವ, ಎಂ.ಸಿ.ಎಸ್.ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿಯವರು ಗೋವರ್ಧನಂ ಸಂಭ್ರಮವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿದರು.
ವಿಶ್ರಾಂತ ಶಿಕ್ಷಕ, ರಂಗ ಕಲಾವಿದ, ಪತ್ರಕರ್ತ ಗೋವಧನ ಹೊಸಮನಿ, ಗೌರಾ ಗೋವರ್ಧನ್ ದಂಪತಿಯನ್ನು ಪ್ರೆಸ್ ಕ್ಲಬ್ ವತಿಯಿಂದ ಭಾವಪೂರ್ಣವಾಗಿ ಸಮ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅರುವತ್ತರ ಸಂಭ್ರಮದಲ್ಲಿರುವ ಪತ್ರಕರ್ತ ಧನಂಜಯ ಮೂಡುಬಿದಿರೆ -ಪುಷ್ಪಾ ದಂಪತಿಯನ್ನು ಸಮ್ಮಾನಿಸಲಾಯಿತು. ಅಶ್ರಫ್ ವಾಲ್ಪಾಡಿಯವರು ಅಭಿನಂದನಾ ಮಾತುಗಳನ್ನಾಡಿ ಗೋವರ್ಧನ ಹೊಸಮನಿ ಹಾಗೂ ಧನಂಜಯ ಮೂಡುಬಿದಿರೆ ಅವರ ಮಾಧ್ಯಮ ಸಹಿತ ಹಲವು ರಂಗಗಳಲ್ಲಿನ ಸಮಾಜ ಮುಖೀ ಸಾಧನೆಗಳನ್ನು ವಿವರಿಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೂಡುಬಿದಿರೆ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ರೇಮಂಡ್ ತಾಕೊಡೆ,ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಹಿರಿಯ ಲೇಖಕ ಡಾ.ದೇಜಪ್ಪ ದಲ್ಲೋಡಿ, ಎಂ.ಸಿ.ಎಸ್.ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಚಂದ್ರಶೇಖರ್,ಬಿಜೆಪಿ ಮುಖಂಡ ಕೆ.ಪಿ.ಜಗದೀಶ ಅಧಿಕಾರಿ, ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಪತ್ರಕರ್ತರಾಗಿ 25 ವರ್ಷ ಪೂರೈಸಿದ ಪ್ರಸನ್ನ ಹೆಗ್ಡೆ, ಪತ್ರಿಕಾ ಸಂಪಾದಕರುಗಳಾಗಿರುವ ಸದಸ್ಯರಾದ ನವೀನ್ ಸಾಲ್ಯಾನ್, ಅಶ್ರಫ್ ವಾಲ್ಪಾಡಿ, ಜೇಸನ್ ತಾಕೋಡೆ ಅವರನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಹಿರಿಯ ಪತ್ರಿಕಾ ವಿತರಕರಾಗಿ ಹಲವು ದಶಕಗಳಿಂದ ಸೇವಾನಿರತ ರಾಜೇಂದ್ರ ಜೈನ್ ಅವರನ್ನೂ ಗೌರವಿಸಲಾಯಿತು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಯಶೋಧರ ವಿ. ಬಂಗೇರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಎಂ. ಗಣೇಶ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.