ಉಳ್ಳಾಲ: ಕೃಷಿ ಪ್ರಧಾನ ಭೂಮಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಕಂಟಕವಾಗುವಂತಹ ಸ್ಥಿತಿ ಬಂಟ್ವಾಳದ ಪಜೀರು ಗ್ರಾಮದಲ್ಲಿ ಉದ್ಭವಿಸಿದೆ, ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪಜೀರು ಗ್ರಾಮದ ಸರ್ವೆ ನಂಬ್ರ 406 /2ಬಿ7 ಮತ್ತು 402 /2ಪಿ7 ನಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ನೀಡಿರುವ 1.05 ಎಕ್ರೆ ವಿಸ್ತೀರ್ಣದಲ್ಲಿ ನಡೆಯುತ್ತಿರುವ ಮಣ್ಣಿನ ಗಣಿಗಾರಿಕೆ ಅಕ್ರಮವಾಗಿದೆ ಅನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಮುಡಿಪು ಇನ್ಫೋಸಿಸ್ ಸಂಸ್ಥೆ ಸಮೀಪದಲ್ಲೇ ಇರುವ ಜಾಗದಲ್ಲಿ ಭಾರೀ ಪ್ರಮಾಣದಲ್ಲಿ ಮುರ ಮಣ್ಣನ್ನು (ಕೆಂಪು ಕಲ್ಲಿನ ಮಣ್ಣು) ಹೊರರಾಜ್ಯಗಳಿಗೆ ಸಾಗಿಸುವ ದೊಡ್ಡ ದಂಧೆ ನಡೆಯುತ್ತಿದೆ. ದಿನದಲ್ಲಿ ಸಾವಿರಾರು ಟನ್ ಮಣ್ಣು ಆಂಧ್ರ, ತಮಿಳುನಾಡು ನೋಂದಾಯಿತ ಲಾರಿಗಳ ಮೂಲಕ ಸಾಗಾಟ ನಡೆಯುತ್ತಿದೆ. ಸಿಮೆಂಟ್ ತಯಾರಿಕೆಗೆ ಮಣ್ಣು ಸಾಗಾಟ ನಡೆಯುತ್ತಿದೆ ಅನ್ನುವ ಉತ್ತರ ಮಣ್ಣು ಅಗೆಯುವ ಕಾರ್ಮಿಕರು ಹೇಳುತ್ತಿದ್ದಾರೆ. ಆದರೆ ಕಾನೂನು ಪ್ರಕಾರವಾಗಿ ಗಣಿಗಾರಿಕೆ ನಡೆಸಲು ಅನುಮತಿಯಿದ್ದರೂ, ಇಂತಿಷ್ಟು ಜಾಗಕ್ಕೆ ಇಷ್ಟೇ ಮಣ್ಣು ತೆಗೆಯಬೇಕು ಅನ್ನುವ ಷರತ್ತುಗಳಿವೆ. ಆದರೆ ಷರತ್ತುಗಳನ್ನು ಮೀರಿ ಟನ್ ಗಟ್ಟಲೆ ಮಣ್ಣು ಅಗೆದು ದಿನದಲ್ಲಿ 30 ಕ್ಕೂ ಅಧಿಕ ಲಾರಿಗಳ ಮೂಲಕ ಸಾಗಾಟ ನಡೆಸಲಾಗುತ್ತಿದೆ.
ಅವೈಜ್ಞಾನಿಕ ದಾರಿ : ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಆಸುಪಾಸಿನಲ್ಲಿ ಕೃಷಿಕರೇ ಹೆಚ್ಚಿದ್ದಾರೆ. ಜನವಸತಿ ಪ್ರದೇಶವೂ ಇದಾಗಿದೆ. ಆದರೆ ಬಳ್ಳಾರಿ ಗಣಿಗಾರಿಕೆಯ ರೀತಿಯಲ್ಲೇ 1.05 ಎಕರೆ ಪ್ರದೇಶವನ್ನು ದೊಡ್ಡ ಹೊಂಡವಾಗಿ ಅಗೆಯಲಾಗಿದೆ. ಇಲ್ಲಿ ಇಕ್ಕಟ್ಟಾಗುವ ಮಳೆ ನೀರು, ಮಣ್ಣು ಕೃಷಿ ಭೂಮಿಗೆ ಇಳಿದಲ್ಲಿ, ಕೃಷಿಭೂಮಿ ಸಂಪೂರ್ಣ ನಾಶವಾಗಲಿದೆ. ದಂಧೆಯ ಬೆಳವಣಿಗೆ ಎಷ್ಟರಮಟ್ಟಿಗೆ ಇದೆ ಎಂದರೆ, ಈ ಬಗ್ಗೆ ಮಾತನಾಡಲು ಸ್ಥಳೀಯರು ಹೆದರುವಂತಹ ಸ್ಥಿತಿಯಲ್ಲಿದ್ದಾರೆ.
ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದಲ್ಲಿ ದಶಕದ ಹಿಂದೆ ಎಸ್ ಇ ಝೆಡ್ ಉದ್ದೇಶಕ್ಕೆ 517 ಎಕರೆ ಜಾಗವನ್ನು ಕೆಐಎಡಿಬಿ ಜಾಗವನ್ನು ಸ್ವಾಧೀನ ಮಾಡಿತ್ತು. ಅದರಲ್ಲಿ 353 ಎಕರೆಯಲ್ಲಿ ಇನ್ಫೋಸಿಸ್ ಸಂಸ್ಥೆ ಕಾರ್ಯಾಚರಿಸುತ್ತಿದೆ. ಉಳಿದ ಜಾಗಕ್ಕೆ 7-8 ವರ್ಷಗಳ ಹಿಂದೆ ಎಸ್ ಈ ಝೆಡ್ ಗಾಗಿ ದ್ವಿತೀಯ ಪಥದ ರಸ್ತೆ ಮಾಡುವಾಗ ಅಲ್ಲಿದ್ದ ಭಾರೀ ಮುರಕಲ್ಲಿನ ಮಣ್ಣನ್ನು ತೆಗೆದು ಕೆಐಎಡಿಬಿಗೆ ಸೇರಿದ ಎಕರೆಗಟ್ಟಲೆ ಜಾಗದಲ್ಲಿ ಪೇರಿಸಿಡಲಾಗಿತ್ತು, ಬಳಿಕ ಲಾರಿಗಳ ಮೂಲಕ ಸಾಗಾಟ ನಡೆಸಲು ಆರಂಭವಾಗಿದೆ.
ರಾತ್ರಿಯಲ್ಲೇ ಕೆಲಸ : ಸಂಜೆ ವೇಳೆ ಲಾರಿಗಳು ಈ ಭಾಗದಲ್ಲಿಸಾಲುಗಟ್ಟಿ ನಿಂತಿರುತ್ತವೆ. ಹಿಟಾಚಿ ಯಂತ್ರಗಳನ್ನು ಬಳಸಿ ಲೋಡ್ ಮಾಡಿ ಕಳುಹಿಸಲಾಗುತ್ತಿದೆ. ಬೇರೆ ರಾಜ್ಯದ ನೋಂದಾಯಿತ ಲಾರಿಗಳಲ್ಲಿ ರ್ಯಾಮ್ಕೋ ಸಿಮೆಂಟ್ ಸೇರಿದಂತೆ ಬೇರೆ ಸಿಮೆಂಟ್ ಕಂಪೆನಿಯ ಹಸರುಗಳು ಇವೆ. ಆದರೆ ರಾತ್ರಿಯಾಗುತ್ತಿದ್ದಂತೆ ಲಾರಿಗಳು ಸಂಚಾರ ಆರಂಭಿಸಿರುವುದರ ವಿರುದ್ಧ ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಮುಡಿಪು ಭಾಗದಲ್ಲಿರುವ ಇತರೆ ಸರಕಾರಿ ಜಾಗಗಳಿಂದಲೂ ಮುರಕಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಪೊಲೀಸ್ ಇಲಾಖೆಯೂ ಈ ಬಗ್ಗೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.