ಬಂಟ್ವಾಳ: ಹೆದ್ದಾರಿ ಪಕ್ಕವೇ ಕೃತಕ ಕೆರೆ.. ಇಲ್ಲಿನವರ ಸ್ಥಿತಿ ಅಯ್ಯೋಯ್ಯೋ ದೇವರೇ..! ಇದು ರಾಷ್ಟ್ರೀಯ ಹೆದ್ದಾರಿ 75 ರ ಪಾಣೆಮಂಗಳೂರಿನಲ್ಲಿ ಕಂಡುಬಂದಿರುವ ದಯನೀಯ ಸ್ಥಿತಿ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿರುವ ಪಾಣೆಮಂಗಳೂರಿನಲ್ಲಿ ಕೃತಕ ಕೆರೆ ನಿರ್ಮಾಣಗೊಂಡಿದ್ದು, ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ತಂದೊಡ್ಡಿದೆ.
ಮೆಲ್ಕಾರ್, ನರಹರಿ ನಗರ, ಬಿ.ಸಿ.ರೋಡು ಸರ್ಕಲ್ ಹೀಗೆ ಸರಣಿಯಲ್ಲಿ ನಡೆದ ಹೆದ್ದಾರಿ ಅಗಲೀಕರಣದ ಕಾರ್ಯ ಕಳೆದ ಕೆಲವು ದಿನಗಳಿಂದ ಪಾಣೆಮಂಗಳೂರು ಸತ್ಯದೇವತಾ ಗುಡಿಯ ಮುಂಭಾಗದಲ್ಲಿ ನಡೆದಿತ್ತು. ಆ ಬಳಿಕ ಇಲ್ಲಿ ಕಂಡುಬಂದಿದ್ದ ವಿಶಾಲವಾದ ಸ್ಥಳ ನಾಗರೀಕರ ಅಚ್ಚರಿಗೆ ಕಾರಣವಾಗಿತ್ತಲ್ಲದೆ ರಸ್ತೆ ಅಗಲೀಕರಣ ಕಾಮಗಾರಿ ಬಗ್ಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದರು.
ಆದರೆ ಇದೀಗ ಕಾಮಗಾರಿ ಸ್ಥಳದಲ್ಲಿ ಮಳೆಯ ನೀರು ನಿಂತಿದ್ದು ಕೃತಕ ಕೆರೆಯ ಕೆಸರುಮಣ್ಣು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಲ್ಲಿ ಇಲ್ಲಿ ಬಸ್ಸಿನಿಂದ ಇಳಿಯುವ ಪ್ರಯಾಣಿಕರ ಕಾಲುಗಳು ಕೆಸರಿನಲ್ಲಿ ಹೂತು ಹೋದ ಘಟನೆಗಳಾಗಿದ್ದರೆ, ಬೈಕ್ ಸವಾರರ ಬೈಕ್ ಕೆಸರಿನಲ್ಲಿ ಬಾಕಿಯಾದ ಘಟನೆಗೂ ನಡೆದಿವೆ. ಸ್ಥಳೀಯವಾಗಿ ರಸ್ತೆ ದಾಟುವ ಪ್ರಯಾಣಿಕರಿಗೂ ಇಲ್ಲಿರುವ ಶಾಲೆಗೂ ಮಕ್ಕಳು ಬರಲು ಈ ಕೆಸರು ಕೆರೆ ತೊಂದರೆ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಮುಂಗಾರು ಮಳೆಯ ಆರ್ಭಟ ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸದ್ರಿ ಸ್ಥಳದಲ್ಲಿ ನೀರು ಹರಿದುಹೋಗಲು ಚರಂಡಿ ನಿರ್ಮಿಸಲು ಸ್ಥಳೀಯಾಡಳಿತ ಅಥವಾ ಹೆದ್ದಾರಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಿತ್ರ:ಕಿಶೋರ್ ಪೆರಾಜೆ