ಉಡುಪಿ: ಜಿಲ್ಲೆಯಲ್ಲಿ ಮರಳು ನೀತಿಯನ್ನು ಸಡಿಲಗೊಳಿಸಿ, ಮರಳು ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಮರಳಿನ ಸಮಸ್ಯೆಗೆ ಪೇಜಾವರ ಶ್ರೀಗಳು ಬೆಂಬಲ ನೀಡಿದ್ದಾರೆ.
ಶುಕ್ರವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶ್ರೀಗಳು ಭಾಗಿಯಾಗಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ. ಅತಿಯಾದ ಮರಳುಗಾರಿಕೆ ಹಾಗೂ ಸಂಪೂರ್ಣ ನಿಷೇಧ ಹೇರುವುದು ಪರಿಸರ ಹಾನಿಕರ. ಸರ್ಕಾರ ಯೋಗ್ಯ ತೀರ್ಪನ್ನು ಕೈಗೊಂಡು ಜನರಿಗೆ ಸೂಕ್ತ ಪರಿಹಾರ ಒದಗಿಸಬೇಕಿದೆ. ನ.10 ರ ಒಳಗಾಗಿ ಸಮಸ್ಯೆ ಬಗೆಹರಿಯದಿದ್ದರೆ ಉಪವಾಸ ಕೈಗೊಳ್ಳಲಾಗುವುದು ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಶಾಸಕ ಕೆ.ರಘುಪತಿ ಭಟ್, ಮರಳು ಸಮಸ್ಯೆ ಹೋರಾಟ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಸದಸ್ಯೆ ಮೊದಲಾದವರು ಉಪಸ್ಥಿತರಿದ್ದರು.