ಮೂಲ್ಕಿ: ತನ್ನ ನಾಲ್ಕರ ಹರೆಯದ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ನದಿಗೆ ಹಾರಿ ಸಾವಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.
ನಿಡ್ಡೋಡಿಯ ಮಂಜ ನಿವಾಸಿ ದಿವಾಕರ ಪೂಜಾರಿ (35) ಹಾಗೂ ಧೃತಿ ಯಾನೆ ಚೆನ್ನಿ (4) ಮೃತಪಟ್ಟವರು. ಮೂಲ್ಕಿ ಬಳಿಯ ಬಪ್ಪನಾಡು ಬಡಗುಹಿತ್ಲು ಗ್ರಾಮದ ಜಳಕದ ಕೆರೆಯ ಶಾಂಭವಿ ನದಿಯ ದಂಡೆಯಲ್ಲಿ ಇಬ್ಬರ ಶವ ಪತ್ತೆಯಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ದಿವಾಕರ ಪೂಜಾರಿಗೆ ಫಲಿಮಾರು ಅವರಾಲು ಮಟ್ಟುವಿನ ಯುವತಿಯೊಂದಿಗೆ ಐದು ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಯ ಪುತ್ರಿ ಧೃತಿ ಪಡುಬಿದ್ರಿಯ ಸಾಗರ ವಿದ್ಯಾ ಮಂದಿರದಲ್ಲಿ ಎಲ್ಕೆಜಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಳು. ಆರ್ಥಿಕ ಮುಗ್ಗಟ್ಟು ತೋರಿದ್ದರಿಂದ ದಿವಾಕರ ಪೂಜಾರಿ ಈ ಕೃತ್ಯ ಎಸೆಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಡಿ.14ರಂದು ಮಾವನ ಮದುವೆಯಲ್ಲಿ ಧೃತಿ ಸಂಭ್ರಮಿಸಿದ್ದಳು. ಘಟನೆಯನ್ನು ಅರಗಿಸಿಕೊಳ್ಳದ ಅವರಾಲು ಮಟ್ಟುವಿನ ಆಕೆಯ ಅಜ್ಜಿ ಮನೆಯಲ್ಲಿ ಈಗ ಶ್ಮಶಾನ ಮೌನ ಆವರಿಸಿದೆ. ಹಣದ ವಿಷಯದಲ್ಲಿ ಬುಧವಾರ ಪತ್ನಿಯೊಂದಿಗೆ ಜಗಳ ಮಾಡಿಕೊಂಡ ದಿವಾಕರ ಅವರು ತನ್ನ ಮಗಳನ್ನು ಗುರುವಾರ ಶಾಲೆಯ ಬಸ್ಸಿನಿಂದ ನೇರವಾಗಿ ತನ್ನೊಂದಿಗೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಶುಕ್ರವಾರ ದಿನ ಪೂರ್ತಿ ಕಳೆದುಕೊಂಡ ಬಾಲಕಿಯನ್ನು ಹೆತ್ತ ತಾಯಿ ಸಹಿತ ಕುಟುಂಬಿಕರು ತೀವ್ರ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ ಶನಿವಾರ ಮುಂಜಾನೆ ಬಪ್ಪನಾಡು ಬಳಿಯಲ್ಲಿ ತಂದೆ ಮತ್ತು ಮಗಳ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ದಿವಾಕರ ಪೂಜಾರಿಯ ವಿರುದ್ಧ ಮಗಳನ್ನು ಕೊಲೆ ಮಾಡಿದ ಪ್ರಕರಣ ದಾಖಲಾಗಿದೆ.