ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಎರಡನೆಯ ತಿರುವಿನಲ್ಲಿ ಬೊಲೆರೋವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದು ಅದರಲ್ಲಿದ್ದವರು ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.
ವಾಹನ ಪ್ರಪಾತಕ್ಕೆ ಉರುಳುತ್ತಿದ್ದಂತೆಯೇ ಹಿಂದಿನಿಂದ ಬರುತ್ತಿದ್ದ ವಾಹನದಲ್ಲಿದ್ದ ಮುಂಡಾಜೆ ಗ್ರಾ. ಪಂ. ಸದಸ್ಯ ಅಬ್ದುಲ್ ಅಝೀಜ್ ಹಾಗೂ ಇತರರು ಕೂಡಲೇ ಅಪಾಯಕ್ಕೆ ಸಿಲುಕಿದ್ದವರ ರಕ್ಷಣೆಗೆ ಧಾವಿಸಿದ್ದು, ಸುಮಾರು 60 ಅಡಿ ಪ್ರಪಾತದಲ್ಲಿ ಸಲುಕಿದ್ದವರನ್ನು ಹಗ್ಗದ ಸಹಾಯದಿಂದ ಮೇಲೆತ್ತಿದ್ದಾರೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾಟ್ಗಿ ನಿವಾಸಿಗಳಾಗಿರುವ ಚಾಲಕ ಶ್ರೀಧರ್(38), ಶರಣಪ್ಪ(34) ಹಾಗೂ ತೇಜಸ್ವಿನಿ(9) ಗಾಯಗೊಂಡವರಾಗಿದ್ದಾರೆ. ವಾಹನದಲ್ಲಿದ್ದ ಇತರರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ರಾತ್ರಿ ಒಂದು ಗಂಟೆಯ ಸಮಯ ಈ ಅಪಘಾತ ಸಂಭವಿಸಿದ್ದು, ರಕ್ಷಣಾ ಕಾರ್ಯದಲ್ಲಿ ಅಬ್ದುಲ್ ಅಝೀಜ್ ಅವರೊಂದಿಗೆ ಹಕ್ಕೀಮ್ ಕಾಜೂರು, ಬಶೀರ, ಹಮೀದ್ ಉಜಿರೆ, ಉಮ್ಮರ್ ಮುಂಡಾಜೆ ಹಾಗೂ ಇತರರು ಸಹಕರಿಸಿದರು.