ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜಿನ ಇನ್ನೋವೇಷನ್ ಕ್ಲಬ್ ಹಾಗೂ ಪರಿಸರ ಸಂಘದ ವತಿಯಿಂದ ಗುರುವಾರ ಆನ್ಲೈನ್ನಲ್ಲಿ “ರಾಷ್ಟ್ರೀಯ ಮಾವಿನ ದಿನ” ಆಚರಿಸಲಾಯಿತು.
ಕಾಲೇಜಿನ ಹಳೇ ವಿದ್ಯಾರ್ಥಿ ರಾಮನಾರಾಯಣ ಭಟ್ ಭಾಗಿಯಾಗಿ ದಿನದ ವಿಶೇಷತೆ ಕುರಿತು ತಿಳಿಸಿದರು.
ಕೇರಳದ ಕಣ್ಣೂರಿನ ಶಿಜು ರವರು ಬೆಳೆದ ಸ್ಥಳೀಯ ಮಾವಿನ ಹಣ್ಣುಗಳು ಮತ್ತು 300 ವಿವಿಧ ತಳಿಗಳನ್ನು ಒಂದೇ ಮರದಲ್ಲಿ ಕಸಿ ಮಾಡಿ ಬೆಳೆಸಿರುವ ವಿಶಿಷ್ಟ ವ್ಯಕ್ತಿ ಪದ್ಮಶ್ರೀ ಹಾಜಿ ಕಲಿಮುಲ್ಲಹ್ ಖಾನ್ ರವರ ಬಗ್ಗೆ ಮಾಹಿತಿ ಪ್ರಸ್ತುತಪಡಿಸಿದರು.
ಪರಿಸರ ಸಂಘದ ಸದಸ್ಯೆ ಪೂಜಾ ಈ ದಿನದ ಇತಿಹಾಸದ ಕುರಿತು ಬೆಳಕು ಚೆಲ್ಲಿದರು. ಕ್ಲಬ್ ನ ಸದಸ್ಯೆ ಸ್ಫೂರ್ತಿ ಕರ್ನಾಟಕದಲ್ಲಿನ ವಿವಿಧ ಮಾವಿನ ಹಣ್ಣುಗಳ ತಳಿಯ ಬಗ್ಗೆ ಚಿತ್ರಸಹಿತ ಮಾಹಿತಿ ನೀಡಿದರು. ಸಂಘದ ಸಹ ನಿರ್ದೇಶಕ ಡಾ. ಸಿದ್ಧರಾಜು ಎಂ. ಎನ್, ಭಾರತದಿಂದ ರಫ್ತಾಗುತ್ತಿರುವ ಮಾವಿನ ಹಣ್ಣುಗಳು ಮತ್ತು ಏಷ್ಯಾದಲ್ಲೇ ಅತಿ ದೊಡ್ಡ ಮಾವಿನ ಹಣ್ಣುಗಳ ಮಾರುಕಟ್ಟೆಯಿರುವ ಕೋಲಾರದ ಶ್ರೀನಿವಾಸಪುರದ ಬಗ್ಗೆ ತಿಳಿಸಿಕೊಟ್ಟರು.
ಪ್ರಾಂಶುಪಾಲೆ ಡಾ. ಅನಸೂಯಾ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಘದ ನವೀನ ಪ್ರಯತ್ನಗಳನ್ನು ಶ್ಲಾಘಿಸಿದರು. ಸಲೋನಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ವೈಷ್ಣವಿ, ದೀಪ್ತಿ, ಮತ್ತು ನೀತುರವರ ಸಹಕಾರವಿತ್ತು.